ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳದಲ್ಲಿ ಮುಂಗಾರುಪೂರ್ವ ಮಳೆಯ ಅಬ್ಬರ: ಆರು ಸಾವು

Published 28 ಮೇ 2024, 16:00 IST
Last Updated 28 ಮೇ 2024, 16:00 IST
ಅಕ್ಷರ ಗಾತ್ರ

ತಿರುವನಂತಪುರ: ಮಂಗಳವಾರ ಸುರಿದ ಮುಂಗಾರುಪೂರ್ವ ಮಳೆಗೆ ಕೊಚ್ಚಿ ನಗರ ಸೇರಿದಂತೆ ಕೇರಳದ ಹಲವು ಪ್ರದೇಶಗಳು ಜಲಾವೃತಗೊಂಡಿವೆ.

ಕೋಟಯಂ ಜಿಲ್ಲೆಯ ಭರಣಂಙಾನಂ ಬಳಿ ಭೂಕುಸಿತ ಸಂಭವಿಸಿದೆ. ಆದರೆ ಜೀವಹಾನಿ ವರದಿಯಾಗಿಲ್ಲ. ಇಲ್ಲಿ ಹಲವು ಮನೆಗಳು ಸಂಪೂರ್ಣವಾಗಿ ನಾಶಗೊಂಡಿವೆ.

ತಿರುವನಂತಪುರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕಾಸರಗೋಡು, ಆಲಪ್ಪುಳ, ಎರ್ನಾಕುಳಂ ಮತ್ತು ಕೋಟಯಂ ಜಿಲ್ಲೆಗಳಲ್ಲಿ ತಲಾ ಒಬ್ಬರು ಜೀವ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಳೆದ ವಾರ ಮಳೆಯಿಂದ ಆದ ಅವಘಡಗಳಿಗೆ ತುತ್ತಾಗಿ ಐದು ಮಂದಿ ಮೃತಪಟ್ಟಿದ್ದರು.

ಕೊಚ್ಚಿಯಲ್ಲಿ ಎರಡು ತಾಸು ಸುರಿದ ಭಾರಿ ಮಳೆಯ ಕಾರಣದಿಂದಾಗಿ ಇದ್ದಕ್ಕಿದ್ದಂತೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಯಿತು. ಕೊಚ್ಚಿಯಲ್ಲಿ ಒಂದೂವರೆ ತಾಸಿನ ಅವಧಿಯಲ್ಲಿ ಸರಿಸುಮಾರು 98 ಮಿ.ಮೀ. ಮಳೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಈ ಪ್ರಮಾಣದ ಮಳೆಗೆ ಮೇಘಸ್ಫೋಟವೇ ಕಾರಣವಿರಬಹುದು ಎಂದಿದ್ದಾರೆ.

ಕಳಮಶ್ಶೇರಿ ಪ್ರದೇಶದಲ್ಲಿ ಸರಿಸುಮಾರು ಇನ್ನೂರು ಮನೆಗಳಿಗೆ ಮಳೆನೀರು ನುಗ್ಗಿದೆ. ಹಲವೆಡೆ ಕಚೇರಿಗಳಲ್ಲಿ ಕೆಲಸಕ್ಕೆ ಅಡ್ಡಿ ಉಂಟಾಯಿತು. ರಾಜ್ಯದ ಹಲವೆಡೆ ರಸ್ತೆಗಳ ಮೇಲೆ ನೀರು ಹೊಳೆಯಂತೆ ಹರಿದ ಕಾರಣಕ್ಕೆ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ರಾಜ್ಯದ ಹಲವೆಡೆ ಕೃಷಿ ಬೆಳೆಗಳಿಗೆ ಹಾನಿ ಉಂಟಾಗಿದೆ.

ಕೋಟಯಂ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ನದಿಗಳು ಉಕ್ಕಿ ಹರಿದ ಪರಿಣಾಮವಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೋಟಯಂ ಮತ್ತು ಇಡುಕ್ಕಿ ಜಿಲ್ಲಾ ಆಡಳಿತವು ಎತ್ತರದ ಘಟ್ಟ ಪ್ರದೇಶಗಳಲ್ಲಿ ಸಂಚಾರಕ್ಕೆ ನಿರ್ಬಂಧಗಳನ್ನು ಹೇರಿವೆ.

ಕೇಂದ್ರ ಹವಾಮಾನ ಇಲಾಖೆಯು ಕೋಟಯಂ ಹಾಗೂ ಎರ್ನಾಕುಳಂ ಜಿಲ್ಲೆಗಳಿಗೆ ಮಂಗಳವಾರ ರೆಡ್ ಅಲರ್ಟ್ ಘೋಷಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT