ಹೌರಾ, ಪಶ್ಚಿಮ ಬಂಗಾಳ: ರಾಮ ನವಮಿ ಅಂಗವಾಗಿ ನಡೆದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವಿನ ಘರ್ಷಣೆ ಹಿನ್ನೆಲೆಯಲ್ಲಿ ಉದ್ವಿಗ್ನಗೊಂಡಿದ್ದ ಹೌರಾದ ಕಾಜಿಪಾಡಾ ಪ್ರದೇಶದಲ್ಲಿ ಪರಿಸ್ಥಿತಿಯು ಶನಿವಾರ ಹತೋಟಿಯಲ್ಲಿದ್ದು, ಶಾಂತಿ ನೆಲೆಸಿತ್ತು.
ಈ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ. ಅಂಗಡಿಗಳು ತೆರೆದಿದ್ದು, ಮಾರುಕಟ್ಟೆಗಳು ಕೂಡ ಕಾರ್ಯನಿರ್ವಹಿಸುತ್ತಿವೆ. ಬಿಗಿ ಭದ್ರತೆ ನಡುವೆಯೇ ವಾಹನಗಳ ಸಂಚಾರವೂ ಆರಂಭವಾಗಿದ್ದು, ಜನಜೀವನ ಸಹಜಸ್ಥಿತಿಗೆ ಮರಳಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಘರ್ಷಣೆ ವೇಳೆ ಉದ್ರಿಕ್ತರು ಹಲವಾರು ಅಂಗಡಿಗಳು ಹಾಗೂ ಮನೆಗಳನ್ನು ಧ್ವಂಸಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಜಿಪಾಡಾ ಪ್ರದೇಶದಲ್ಲಿ ನಿಷೇಧಾಜ್ಞೆಯ ಮುಂದುವರಿಕೆ ಜೊತೆಗೆ, ಇಂಟರ್ನೆಟ್ ಸೇವೆಯನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದೂ ಹೇಳಿದ್ದಾರೆ.
ಘಟನೆ ಕುರಿತ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದೆ. ಶುಕ್ರವಾರ ತಡರಾತ್ರಿ ಕೂಡ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದು, ವಿಧ್ವಂಸಕ ಕೃತ್ಯಗಳಲ್ಲಿ ಶಾಮೀಲಾದವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.