ಭೋಪಾಲ್: ಗ್ರಾಮೀಣ ಭಾಗದ ಜನರಿಗೆ ಆಸ್ತಿ ಹಕ್ಕು ಕಾರ್ಡ್ ವಿತರಿಸುವ ಮಹತ್ವಾಕಾಂಕ್ಷಿ ‘ಸ್ವಾಮಿತ್ವ ಯೋಜನೆ’ಯನ್ನು ಶೀಘ್ರವೇ ರಾಷ್ಟ್ರದಾದ್ಯಂತ ಜಾರಿಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು.
ಹರ್ದಾ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ವರ್ಚುವಲ್ ವಿಧಾನದ ಮೂಲಕ ಅವರು ಮಾತನಾಡಿದರು.
‘ಸರ್ವೆ ಆಫ್ ವಿಲೇಜಸ್ ಆಬಾದಿ ಆ್ಯಂಡ್ ಮ್ಯಾಪಿಂಗ್ ವಿಥ್ ಇಂಪ್ರೂವೈಸ್ಡ್ ಟೆಕ್ನಾಲಜಿ ಇನ್ ವಿಲೇಜ್ ಏರಿಯಾಸ್’ ಎಂಬುದರ ಸಂಕ್ಷಿಪ್ತ ರೂಪವೇ ‘ಸ್ವಾಮಿತ್ವ’.
‘ಸ್ವಾಮಿತ್ವ ಯೋಜನೆಯಿಂದಾಗಿ ಗ್ರಾಮೀಣ ಪ್ರದೇಶದ ಆರ್ಥಿಕತೆ ಮತ್ತಷ್ಟು ಸದೃಢಗೊಂಡಿದೆ. ದೇಶದ ಗ್ರಾಮಗಳ ಅಭಿವೃದ್ಧಿಯಲ್ಲಿ ಈ ಯೋಜನೆಯಿಂದ ಹೊಸ ಅಧ್ಯಾಯವೇ ಆರಂಭವಾಗಲಿದೆ’ ಎಂದೂ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
‘ಈ ಯೋಜನೆಯ ಸಮೀಕ್ಷಾ ಕಾರ್ಯವನ್ನು 10 ತಿಂಗಳಲ್ಲಿ ಪೂರ್ಣಗೊಳಿಸಲಾಯಿತು. ಕೆಲವು ರಾಜ್ಯಗಳಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದ್ದು, ಯಶಸ್ವಿಯೂ ಆಗಿದೆ. ಹೀಗಾಗಿ ಶೀಘ್ರವೇ ಈ ಯೋಜನೆಯನ್ನು ಎಲ್ಲ ರಾಜ್ಯಗಳಿಗೆ ವಿಸ್ತರಿಸಲಾಗುವುದು’ ಎಂದರು.