ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಮೂವರು ಬುಧವಾರ ತಮ್ಮ ತಾಯ್ನಾಡು ಶ್ರೀಲಂಕಾಕ್ಕೆ ಮರಳಿದ್ದಾರೆ. ಸುಪ್ರೀಂ ಕೋರ್ಟ್ನಿಂದ ಬಿಡುಗಡೆ ಆದೇಶ ಹೊರಬಿದ್ದ ಎರಡು ವರ್ಷಗಳ ಬಳಿಕ ಅವರು ತಮ್ಮ ದೇಶಕ್ಕೆ ಹೊರಟಿದ್ದಾರೆ.
‘30 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ವಿ.ಮುರುಗನ್ ಅಲಿಯಾಸ್ ಶ್ರೀಕರಣ್, ಎಸ್.ಜಯಕುಮಾರ್, ಬಿ.ರಾಬರ್ಟ್ ಪಾಯಸ್ ಅವರು ವಿಮಾನದ ಮೂಲಕ ಕೊಲಂಬೊಗೆ ಹೊರಟರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಲಂಕಾ ಹೈ–ಕಮಿಷನ್ ಅವರು ಮುರುಗನ್ ಮತ್ತಿತರರಿಗೆ ಪ್ರಯಾಣ ದಾಖಲೆಗಳನ್ನು ನೀಡಿದ್ದು, ವಿದೇಶೀಯರ ಸ್ಥಳೀಯ ನೋಂದಣಿ ಕಚೇರಿಯ ಆದೇಶದ ಬಳಿಕ ಅವರು ತಮ್ಮ ಊರುಗಳಿಗೆ ಮರಳಲಿದ್ದಾರೆ ಎಂದು ತಮಿಳುನಾಡು ಸರ್ಕಾರ ಕಳೆದ ತಿಂಗಳು ಮದ್ರಾಸ್ ಹೈಕೋರ್ಟ್ಗೆ ತಿಳಿಸಿತ್ತು.
ರಾಜೀವ್ ಗಾಂಧಿ ಹತ್ಯೆ ಪ್ರಕರಣದ 7 ಅಪರಾಧಿಗಳನ್ನು ಬಂಧನದಿಂದ ಮುಕ್ತಗೊಳಿಸುವಂತೆ ಸುಪ್ರೀಂ ಕೋರ್ಟ್ 2022 ನವೆಂಬರ್ನಲ್ಲಿ ಆದೇಶ ನೀಡಿತ್ತು. ಇವರಲ್ಲಿ ಶ್ರೀಲಂಕಾ ಮೂಲದ ಇನ್ನೋರ್ವ ವಕ್ತಿ ಇತ್ತೀಚೆಗೆ ಮೃತಪಟ್ಟಿದ್ದಾನೆ. ಉಳಿದ ಮೂವರು ಭಾರತೀಯರೇ ಆಗಿದ್ದಾರೆ.