ವಯನಾಡು, ಕೇರಳ: ಜನವಸತಿ ಪ್ರದೇಶಕ್ಕೆ ನುಗ್ಗಿದ್ದ ಹುಲಿಯೊಂದನ್ನು ಕಾರ್ಯಾಚರಣೆ ಬಳಿಕ ಸೆರೆ ಹಿಡಿದಿರುವ ಘಟನೆ ಕೇರಳದ ವಯನಾಡು ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ವಯನಾಡು ಜಿಲ್ಲೆಯ ಕಾಲಪೆಟ್ಟಾ ಎಂಬ ಜನವಸತಿ ಪ್ರದೇಶಕ್ಕೆ ಹುಲಿ ನುಗ್ಗಿತ್ತು. ಈ ವೇಳೆ ಬೆದರಿದ ಹುಲಿ ಮನೆಯೊಂದರ ಹಿತ್ತಲಿನಲ್ಲಿ ನೀರು ಇದ್ದ ಬಾವಿಯಲ್ಲಿ ಬಿದ್ದಿತ್ತು.
ಮನೆಯವರು, ಛಾವಣಿ ಮೇಲಿನ ನೀರಿನ ಟ್ಯಾಂಕ್ಗೆ ನೀರು ಪೂರೈಕೆ ಆಗದಿದ್ದನ್ನು ಪರಿಶೀಲಿಸಲು ಹೋಗಿದ್ದಾಗ ಬಾವಿಯಲ್ಲಿ ಹುಲಿ ಇರುವುದು ಗೊತ್ತಾಗಿದೆ.
ಸುದ್ದಿ ತಿಳಿದ ಅರಣ್ಯಾಧಿಕಾರಿಗಳ ತಂಡ ಬಾವಿಯಿಂದ ನೀರನ್ನು ಹೊರಗೆ ಹಾಕಿ, ಬಳಿಕ ಅರವಳಿಕೆ ನೀಡಿ ಅದನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ವೈದ್ಯಕೀಯ ತಪಾಸಣೆ ನಂತರ ಗಂಡು ಹುಲಿಯನ್ನು ಕಾಡಿಗೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.