ಮುಂಬೈ: ಸಂಕಷ್ಟದಲ್ಲಿ ತನಗೆ ಸಹಾಯ ಮಾಡಿದ್ದಕ್ಕಾಗಿ ಶರದ್ ಪವಾರ್ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಎನ್ಸಿಪಿ (ಎಸ್ಪಿ) ಎಂಎಲ್ಸಿ ಏಕನಾಥ್ ಖಾಡ್ಸೆ ಅವರು, ಮುಂದಿನ 15 ದಿನಗಳಲ್ಲಿ ತಮ್ಮ ಮಾತೃ ಪಕ್ಷ ಬಿಜೆಪಿಗೆ ಸೇರುವುದಾಗಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಬಿಜೆಪಿಗೆ ಮರಳಲು ನಿರ್ಧರಿಸಿದ್ದೇನೆ. ಅದು ನನ್ನ ಮನೆ. ನಾಲ್ಕು ದಶಕಗಳಿಂದ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇನೆ' ಎಂದು ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ಮುಂದಿನ 15 ದಿನಗಳಲ್ಲಿ ದೆಹಲಿಯಲ್ಲಿ ಪಕ್ಷಕ್ಕೆ ಸೇರುತ್ತೇನೆ ಎಂದೂ ಅವರು ಹೇಳಿದ್ದಾರೆ.
ಹಿರಿಯ ನಾಯಕ ಖಾಡ್ಸೆ ಅವರು ಈ ಹಿಂದೆ ಮಹಾರಾಷ್ಟ್ರ ಸರ್ಕಾರದ ಕಂದಾಯ ಸಚಿವರಾಗಿದ್ದರು. 2016ರಲ್ಲಿ ಭೂ ವ್ಯವಹಾರ ಸಂಬಂಧಿತ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾಮಕ್ಕೆ ರಾಜೀನಾಮೆ ನೀಡಿದ್ದರು.
ಒಂದು ಕಾಲದಲ್ಲಿ ಮಹಾರಾಷ್ಟ್ರದ ಬಿಜೆಪಿಯಲ್ಲಿ ಪ್ರಮುಖ ನಾಯಕರಾಗಿದ್ದ ಖಾಡ್ಸೆ ಅವರು, ಬಿಜೆಪಿಯೊಂದಿಗಿನ 40 ವರ್ಷಗಳ ಸಂಬಂಧ ಕಡಿದುಕೊಂಡು 2020ರಲ್ಲಿ ಶರದ್ ಪವಾರ್ ಅವರ ಎನ್ಸಿಪಿ (ಅವಿಭಜಿತ) ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.