ಭೋಪಾಲ್: ‘ನನಗಾಗಿ ಏನನ್ನಾದರೂ ಪಕ್ಷದಿಂದ ಕೇಳುವ ಬದಲು ಸಾಯುವುದೇ ಮೇಲು’ ಎಂದು ಮಧ್ಯಪ್ರದೇಶದ ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಪಕ್ಷದಲ್ಲಿ ಉನ್ನತ ಹುದ್ದೆ ಕೇಳುವ ಯೋಚನೆ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಚೌಹಾಣ್, ‘ದೆಹಲಿಗೆ ಹೋಗಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ನನಗಾಗಿ ಏನನ್ನಾದರೂ ಕೇಳುವ ವ್ಯಕ್ತಿತ್ವ ನನ್ನದಲ್ಲ. ಇದು ನಾನು ಮಾಡುವ ಕೆಲಸವೇ ಅಲ್ಲ. ಬೇಕಾದರೆ ಸಾಯುತ್ತೇನೆ’ ಎಂದರು.
‘ವ್ಯಕ್ತಿ ಸ್ವಾರ್ಥಿಯಾದರೆ ಮಾತ್ರ ಸದಾ ತನ್ನ ಬಗ್ಗೆ ಯೋಚಿಸುತ್ತಾನೆ. ಬಿಜೆಪಿ ಒಂದು ಮಿಷನ್ ಆಗಿದ್ದು, ಅಲ್ಲಿ ಎಲ್ಲರಿಗೂ ಒಂದು ಕೆಲಸವಿರುತ್ತದೆ. ಪಕ್ಷ ವಹಿಸುವ ಯಾವುದೇ ಕೆಲಸ ಮಾಡಲು ನಾನು ಸಿದ್ದನಾಗಿದ್ದೇನೆ’ ಎಂದು ಹೇಳಿದರು.
ನೂತನ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಸದಾ ಅವರ(ಮೋಹನ್ ಯಾದವ್) ಕೆಲಸಗಳಿಗೆ ಸಹಕಾರ ನೀಡುತ್ತೇನೆ. ಬಾಕಿಯಿರುವ ಕಾಮಗಾರಿಗಳನ್ನು ಯಾದವ್ ನೇತೃತ್ವದ ಹೊಸ ಸರ್ಕಾರ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ’ ಎಂದರು.
‘ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದದಿಂದ ರಾಜ್ಯದಲ್ಲಿ ಬಿಜೆಪಿ ಮತ್ತೆ ಬಹುಮತದೊಂದಿಗೆ ಗೆದ್ದು ಸರ್ಕಾರ ರಚಿಸಿದೆ. ಪಕ್ಷದ ಕಾರ್ಯಕರ್ತರ ಶ್ರಮ, ರಾಜ್ಯ ಮತ್ತು ಕೇಂದ್ರದ ಕಲ್ಯಾಣ ಯೋಜನೆಗಳ ಫಲವಾಗಿ ಇಂದು ಅಧಿಕಾರ ಹಿಡಿದಿದ್ದೇವೆ’ ಎಂದರು.