ಕುರುಕ್ಷೇತ್ರ (ಹರ್ಯಾಣ): ಎಡೆಬಿಡದ ಮಳೆ ಮತ್ತು ಮೇವು ಕೊರತೆಯಿಂದಾಗಿ ಕುರುಕ್ಷೇತ್ರದ ಮಥಾನಾ ಗ್ರಾಮದಲ್ಲಿರುವ ಸರ್ಕಾರಿ ಗೋಶಾಲೆಯಲ್ಲಿ ಕನಿಷ್ಠ 25 ಗೋವುಗಳು ಸಾವಿಗೀಡಾಗಿವೆ.
ಇಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗೋಶಾಲೆಯೊಳಗೆ ನೀರು ತುಂಬಿ ಜವುಗು ನೆಲದಲ್ಲಿ ಗೋವುಗಳು ನಿಲ್ಲುವಂತಾಗಿದೆ. ಕೆಲವೊಂದು ರೋಗ ಬಂದು ಸತ್ತರೆ ಇನ್ನು ಕೆಲವು ಗೋವುಗಳು ಮೇವು ಸಿಗದೆ ಹಸಿವಿನಿಂದ ಸತ್ತಿವೆ ಎಂದು ಗ್ರಾಮದ ಮುಖ್ಯಸ್ಥ ಕಿರಣ್ ಬಾಲಾ ಹೇಳಿದ್ದಾರೆ.
ಹರ್ಯಾಣ ಗೋ ಸೇನಾ ಕಮಿಷನ್ ಅಧ್ಯಕ್ಷ ಭನೀ ದಾಸ್ ಮಂಗಲಾ ಮತ್ತು ಕೆಲವು ಆಡಳಿತಾಧಿಕಾರಿಗಳು ಗುರುವಾರ ಸಂಜೆ ಪ್ರಸ್ತುತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.
ಗೋಶಾಲೆಯಲ್ಲಿ ಅನಾರೋಗ್ಯಕ್ಕೀಡಾಗಿರುವ ಹಸುಗಳನ್ನು ಕರ್ನಾಲ್ನಲ್ಲಿರುವ ಗೋಶಾಲೆಗೆ ಸಾಗಿಸುವಂತೆ ಉಪ ವಿಭಾಗೀಯ ಮೆಜಿಸ್ಟ್ರೇಟ್ ನರೇಂದ್ರ ಪಾಲ್ ಮಲಿಕ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಇನ್ನಿತರ ಗೋವುಗಳನ್ನು ಕುರುಕ್ಷೇತ್ರದಲ್ಲಿರುವ ಗೋಶಾಲೆಯ ದುರಸ್ಥಿ ಕಾರ್ಯ ನಡೆಯುವವರೆಗೆ ರಾಜ್ಯದಲ್ಲಿರುವ 20 ಗೋಶಾಲೆಗಳಿಗೆ ಸ್ಥಳಾಂತರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಸದ್ಯ ಈ ಗೋಶಾಲೆಯಲ್ಲಿ 600ಕ್ಕಿಂತಲೂ ಹೆಚ್ಚು ಗೋವುಗಳಿವೆ. ಗೋವುಗಳಿಗೆ ಇರಲು ಸರಿಯಾದ ಸೌಲಭ್ಯ ಇಲ್ಲಿಲ್ಲ. ಕೆಲವೊಂದು ಗೋವುಗಳಿಗೆ ಮೇವು, ಕುಡಿಯಲು ನೀರು ಸಿಗುತ್ತಿಲ್ಲ ಎಂದು ಶ್ರೀ ಕೃಷ್ಣ ಗೋಶಾಲೆಯ ಮಾಜಿ ಅಧ್ಯಕ್ಷ ಅಶೋಕ್ ಪಪ್ನೇಜಾ ಹೇಳಿದ್ದಾರೆ.
ಜಿಲ್ಲಾಡಳಿತ ಈ ಗೋಶಾಲೆಯನ್ನು ಆರಂಭಿಸಿದ್ದರೂ ಇದರ ಕಾರ್ಯ ನಿರ್ವಹಣೆಯ ಹೊಣೆಯನ್ನು ಗ್ರಾಮ ಪಂಚಾಯತ್ ಮತ್ತು ರಾಜ್ಯ ಪಶು ಸಂಗೋಪನೆ ಇಲಾಖೆ ತೆಗೆದುಕೊಂಡಿದೆ ಎಂದು ಮಲಿಕ್ ಹೇಳಿದ್ದಾರೆ.
ನಮ್ಮ ಇಲಾಖೆ ಪ್ರಾಣಿಗಳ ಆರೈಕೆ ಮಾಡುತ್ತಿದೆ. ಗ್ರಾಮದ ಪಶು ವೈದ್ಯಾಧಿಕಾರಿಗಳು ಗೋವುಗಳಿಗೆ ಚುಚ್ಚುಮದ್ದನ್ನೂನೀಡಿದ್ದಾರೆ ಎಂದು ಪಶು ಸಂಗೋಪನೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ. ಧರ್ಮಿಂದರ್ ಸಿಂಗ್ ಹೇಳಿದ್ದಾರೆ.
ಜವುಗು ನೆಲದಲ್ಲಿ ನಿಂತ ಕಾರಣ ಕೆಲವು ಗೋವುಗಳು ಜೀವ ಕಳೆದುಕೊಂಡಿವೆ. ಕಳೆದ ಕೆಲವು ದಿನಗಳಿಂದ 25-30 ಗೋವುಗಳು ಈ ರೀತಿ ಸತ್ತಿವೆ ಎಂದು ಸಿಂಗ್ ಹೇಳಿದ್ದಾರೆ.