ನವದೆಹಲಿ: ಕಠುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಕುಟುಂಬ ಮತ್ತು ವಕೀಲೆಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸುಪ್ರೀಂಕೋರ್ಟ್ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಸೋಮವಾರ ಸೂಚಿಸಿದೆ.
ತಮ್ಮ ಕುಟುಂಬ ಹಾಗೂ ಕೇಸು ವಾದಿಸುತ್ತಿರುವ ವಕೀಲೆಗೆ ಪೊಲೀಸ್ ರಕ್ಷಣೆ ನೀಡಬೇಕು. ಜಮ್ಮುವಿನ ಕಠುವಾದ ಸ್ಥಳೀಯ ನ್ಯಾಯಾಲಯದಲ್ಲಿ ಸರಿಯಾಗಿ ವಿಚಾರಣೆ ನಡೆಯುವುದಿಲ್ಲ, ಹಾಗಾಗಿ ಚಂಡಿಗಢದ ನ್ಯಾಯಾಲಯಕ್ಕೆ ಪ್ರಕರಣ ವರ್ಗಾಯಿಸುವಂತೆ ಸಂತ್ರಸ್ತೆಯ ಅಪ್ಪ ಸುಪ್ರೀಂಕೋರ್ಟ್ಗೆ ಸಲಿಸಿದ್ದ ಮನವಿಯಲ್ಲಿ ಕೋರಿದ್ದರು.
ಕೇಸು ವಾದಿಸುತ್ತಿರುವ ತನಗೆ ಜೀವ ಬೆದರಿಕೆ ಇದೆ ಎಂದು ವಕೀಲೆ ದೀಪಿಕಾ ಸಿಂಗ್ ರಜಾವತ್ ಕೂಡ ಹೇಳಿದ್ದಾರೆ.
ಜಮ್ಮುವಿನ ಕಠುವಾದಲ್ಲಿ ಎಂಟು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆಗೈದ ಪ್ರಕರಣದಲ್ಲಿ ಈವರೆಗೆ 8 ಮಂದಿಯನ್ನು ಬಂಧಿಸಲಾಗಿದೆ.
ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಕಠುವಾ ನ್ಯಾಯಾಲಯವು ಏಪ್ರಿಲ್ 28ಕ್ಕೆ ಮುಂದೂಡಿದೆ.