ಬೆಂಗಳೂರು: ಲೋಕಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆ ರೂಪಿಸುವ ಸಂಬಂಧ ಯುವಜನರ ಅಭಿಪ್ರಾಯ ಸಂಗ್ರಹಿಸಲು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ನಡೆಸಿದ ಸಂವಾದ ಕಾರ್ಯಕ್ರಮ ರಹಸ್ಯವಾಗಿತ್ತು.
ಆಹ್ವಾನಿತರು ಮತ್ತು ಪಕ್ಷದ ಆಯ್ದ ಮುಖಂಡರಿಗೆ ಮಾತ್ರ ಕಾರ್ಯಕ್ರಮಕ್ಕೆ ಪ್ರವೇಶ ಇತ್ತು. ಮಾಧ್ಯಮಗಳನ್ನೂ ದೂರ ಇಡಲಾಗಿತ್ತು. ಸಂವಾದದ ಟಿಪ್ಪಣಿ, ಛಾಯಾಚಿತ್ರಗಳನ್ನೂ ಪಕ್ಷವೇ ಬಿಡುಗಡೆ ಮಾಡಿತು.
ಮಧ್ಯಾಹ್ನ 1.45ರ ಸುಮಾರಿಗೆ ಅರಮನೆ ಮೈದಾನದ ಟೆನಿಸ್ ಪೆವಿಲಿಯನ್ಗೆ ಬಂದ ರಾಹುಲ್, ಎರಡು ಗಂಟೆ ಕಾಲ ಯುವಜನರ ಜೊತೆ ಸಂವಾದ ನಡೆಸಿದರು. ನಂತರ ಅಲ್ಲಿಯೇ ಕೆಪಿಸಿಸಿ ಅಧ್ಯಕ್ಷರ ಜೊತೆ ಕೆಲಕಾಲ ಚರ್ಚಿಸಿದರು. ಉಳಿದಂತೆ ಪಕ್ಷದ ಯಾವುದೇ ಮುಖಂಡರನ್ನೂ ಭೇಟಿ ಮಾಡಲಿಲ್ಲ. ಸಂಜೆ ವಿಶೇಷ ವಿಮಾನದಲ್ಲಿ ದೆಹಲಿಗೆ ವಾಪಸಾದರು.
ಅರಮನೆ ಮೈದಾನಕ್ಕೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಮೌಂಟ್ ಕಾರ್ಮೆಲ್ ಕಾಲೇಜು ಕಡೆಯ ಪ್ರವೇಶ ದ್ವಾರದಿಂದ ಅನುಮತಿ ಪತ್ರ ಹೊಂದಿದವರಿಗೆ ಮಾತ್ರ ಬಿಡಲಾಯಿತು. ಅರಮನೆ ಮೈದಾನದ ಆವರಣದಲ್ಲಿರುವ ಹೋಟೆಲ್ಗಳು, ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರು, ಕಾರ್ಮಿಕರಿಗೆ ಇದರಿಂದ ಕಷ್ಟವಾಯಿತು.
ಗುರುತಿನ ಚೀಟಿ ಇಲ್ಲದೇ ಬಂದವರನ್ನು ಪೊಲೀಸರು ಒಳಕ್ಕೆ ಬಿಡಲಿಲ್ಲ. ಬೇರೆ ದಾರಿ ಕಾಣದೇ ಮನೆಗೆ ಮರಳಿದರು.
ಪ್ರಮೋದಾದೇವಿ ಭೇಟಿ
ರಾಹುಲ್ ಗಾಂಧಿ ಅವರು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪತ್ನಿ ಪ್ರಮೋದಾದೇವಿ ಅವರನ್ನು ಭೇಟಿ ಮಾಡಿದರು.
ಅರಮನೆಯ ಪ್ರವೇಶ ದ್ವಾರದಲ್ಲೇ ಕೆಲ ನಿಮಿಷಗಳ ಅವಧಿಯಲ್ಲೇ ಈ ಭೇಟಿ ನಡೆದಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಈ ಸಂದರ್ಭದಲ್ಲಿ ಹಾಜರಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.