ಶ್ರೀನಗರ: ಪುಲ್ವಾಮಾ ಜಿಲ್ಲೆಯಲ್ಲಿ ಗುರುವಾರ ಉಗ್ರರ ವಿರುದ್ಧ ನಡೆದ ಎನ್ಕೌಂಟರ್ನಲ್ಲಿ ನಾಗರಿಕರೊಬ್ಬರು ಮೃತಪಟ್ಟಿರುವುದನ್ನು ವಿರೋಧಿಸಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಶುಕ್ರವಾರ ಕರೆ ನೀಡಿದ್ದ ಪ್ರತಿಭಟನೆಯಿಂದಾಗಿ ಇಲ್ಲಿನ ಜನಜೀವನ ತೊಂದರೆಯಾಗಿತ್ತು.
ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಬಹುತೇಕ ಅಂಗಡಿ, ಮಳಿಗೆಗಳು, ಪೆಟ್ರೋಲ್ ಬಂಕ್ಗಳು, ವ್ಯಾಪಾರ, ವಹಿವಾಟಿನ ಕೇಂದ್ರಗಳು ಬಾಗಿಲು ಮುಚ್ಚಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕ ಸಾರಿಗೆ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಆದರೆ ನಗರದ ಕೆಲವೆಡೆ ಖಾಸಗಿ ಕಾರು, ಕ್ಯಾಬ್ ಮತ್ತು ಆಟೊ ರಿಕ್ಷಾಗಳು ಸಂಚರಿಸುತ್ತಿದ್ದವು ಎಂದು ಅವರು ಹೇಳಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಶ್ರೀನಗರದ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಕಣಿವೆ ಪ್ರದೇಶದ ಇತರ ಜಿಲ್ಲೆಗಳಲ್ಲೂ ಇದೇ ಸ್ಥಿತಿ ಇತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪುಲ್ವಾಮಾದ ಜಿಲ್ಲೆಯಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರು ಮತ್ತು ಭದ್ರತಾ ಪಡೆ ದಾಳಿ ನಡೆಸಿತ್ತು. ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆಯಿತು. ಭದ್ರತಾ ಪಡೆ ಆರು ಉಗ್ರರನ್ನು ಹೊಡೆದುರುಳಿಸಿತ್ತು. ಈ ವೇಳೆ ಉಗ್ರರ ಪ್ರತಿದಾಳಿಗೆ ಒಬ್ಬ ಯೋಧ ಹುತಾತ್ಮರಾಗಿದ್ದರು. ಈ ವೇಳೆ ನಾಗರಿಕರೊಬ್ಬರು ಮೃತರಾಗಿದ್ದರು.
ರಂಜಾನ್ ಮಾಸದಲ್ಲಿ ನಾಗರಿಕರೊಬ್ಬರನ್ನು ಕೊಲ್ಲಲಾಗಿದೆ ಎಂದು ಆರೋಪಿಸಿ ಪ್ರತ್ಯೇಕತಾವಾದಿಗಳು ಪ್ರತಿಭಟನೆಗೆ ಕೆರೆ ನೀಡಿದ್ದರು.