ನವದೆಹಲಿ (ಪಿಟಿಐ): ರಾಜಧಾನಿ ದೆಹಲಿಯಲ್ಲಿ ಕೊನೆಗೂ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಫೆಬ್ರುವರಿ ೭ರಂದು ಮತದಾನ ನಡೆಯಲಿದೆ. ೧೦ರಂದು ಫಲಿತಾಂಶ ಹೊರಬೀಳಲಿದೆ.
ವರ್ಷದಿಂದ ದೆಹಲಿಯಲ್ಲಿ ಇದ್ದ ರಾಜಕೀಯ ಅತಂತ್ರ ಸ್ಥಿತಿ ಇದರಿಂದಾಗಿ ಕೊನೆಗೊಳ್ಳುವ ಭರವಸೆ ಮೂಡಿದೆ. ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಬಿಜೆಪಿ ಹಾಗೂ 2013ರ ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಸಾಧನೆ ಮಾಡಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ನಡುವೆ ನೇರ ಹಣಾಹಣಿ ನಡೆಯುವ ಎಲ್ಲ ಸೂಚನೆಗಳು ಇವೆ.
ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಒಟ್ಟು ೭೦ ಕ್ಷೇತ್ರಗಳಲ್ಲಿ
೧ ಕೋಟಿ 30 ಲಕ್ಷ ಮತದಾರರು ಹಕ್ಕು ಚಲಾಯಿಸಲಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೆಹಲಿ ವಿಧಾನಸಭೆ ವಿಸರ್ಜನೆಗೆ ರಾಷ್ಟ್ರಪತಿ ಹೊರಡಿಸಿದ್ದ ಆದೇಶವು ಫೆ.೧೫ರಂದು ಕೊನೆಗೊಳ್ಳಲಿರುವುದರಿಂದ ಇಷ್ಟರೊಳಗೆ ಚುನಾವಣೆ ನಡೆಸಿ ಹೊಸದಾಗಿ ಜನಾದೇಶ ಪಡೆಯುವುದು ಅನಿರ್ವಾಯವಾಗಿತ್ತು.
ಹಿನ್ನೋಟ: ೨೦೧೩ರ ಡಿಸೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ೩೧ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ೨೮ ಸ್ಥಾನ ಗೆದ್ದಿದ್ದ ಎಎಪಿ ಎರಡನೇ ಸ್ಥಾನದಲ್ಲಿ ಇತ್ತು. ಬಿಜೆಪಿ ಸರ್ಕಾರ ರಚಿಸಲು ಹಿಂದೇಟು ಹಾಕಿತ್ತು.
ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರಿಗೆ ಕಾಂಗ್ರೆಸ್ ಷರತ್ತುಬದ್ಧ ಬೆಂಬಲ ನೀಡಿತ್ತು. ಮತದಾರರಿಗೆ ವಚನ ನೀಡಿದಂತೆ ವಿಧಾನಸಭೆಯಲ್ಲಿ ಜನಲೋಕಪಾಲ ಮಸೂದೆ ಅಂಗೀಕರಿಸಲು ವಿಫಲವಾಗಿದ್ದರಿಂದ ಕೇವಲ ೪೯ ದಿನದ ನಂತರ (೨೦೧೪, ಫೆ.೧೪) ಕೇಜ್ರಿವಾಲ್ ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಬಿಜೆಪಿ, ಕಾಂಗ್ರೆಸ್ ಹಾಗೂ ಎಎಪಿಗೆ ಸರ್ಕಾರ ರಚಿಸಲು ಬೇಕಾದ ಸಂಖ್ಯಾಬಲ ಇಲ್ಲದ ಕಾರಣ ಕಳೆದ ವರ್ಷದ ಫೆಬ್ರುವರಿ 17ರಂದು ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು. ಯಾವ ಪಕ್ಷವೂ ಸರ್ಕಾರ ರಚನೆಗೆ ಮುಂದಾಗಲಿಲ್ಲ. ಅಂತಿಮವಾಗಿ ವಿಧಾನಸಭೆಯನ್ನು ವಿಸರ್ಜಿಸಲಾಗಿತ್ತು.
ಬಿಜೆಪಿಗೆ ಮೋದಿ ಮಂತ್ರದಂಡ: ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿ ತಾನು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸುವುದಿಲ್ಲ ಎಂದು ಹೇಳಿಕೊಂಡಿದೆ.
‘ ಈ ಬಾರಿ ನಾವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ’ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ತಿಳಿಸಿದ್ದಾರೆ.
ಅರವಿಂದ ಕೇಜ್ರಿವಾಲ್ ಅವರಿಗೆ ಸರಿಸಾಟಿಯಾಗುವಂತಹ ವ್ಯಕ್ತಿಯನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರಿಸುವಂತೆ ಬಿಜೆಪಿಗೆ ಎಎಪಿ ಸವಾಲು ಹಾಕಿದೆ.
ಮಾಕನ್ ಸಾರಥ್ಯ: ಕಾಂಗ್ರೆಸ್ ಪಕ್ಷವು ತನ್ನ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಅವರಿಗೆ ಚುನಾವಣಾ ಪ್ರಚಾರ ಸಮಿತಿಯ ಸಾರಥ್ಯ ವಹಿಸುವ ಸಾಧ್ಯತೆ ಇದೆ.
***
ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ. ಯಾವುದೇ ಕಾರಣಕ್ಕೂ ‘ದ್ವೇಷ ಭಾಷಣ’ ಸಹಿಸುವುದಿಲ್ಲ
– ವಿ.ಎಸ್.ಸಂಪತ್,ಮುಖ್ಯಚುನಾವಣಾ ಆಯುಕ್ತ
ಬಿಜೆಪಿಗೆ ಹೆಚ್ಚು ಸ್ಥಾನ?
ದೆಹಲಿ ಚುನಾವಣೆಗೆ ಸಂಬಂಧಿಸಿ ಹೆಡ್ಲೈನ್ಸ್ ಟುಡೆ ವಾಹಿನಿ– ಸಿಸೆರೊ ಜನವರಿ ಮೊದಲ ವಾರ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸಲಿದೆ ಎಂಬ ಅಭಿಪ್ರಾಯ ಮೂಡಿಬಂದಿದೆ.
ಬಿಜೆಪಿ ಶೇ 40ರಷ್ಟು ಮತ ಗಳಿಸಲಿದ್ದು, 34ರಿಂದ 40 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಯಿದೆ. ಆಮ್ ಆದ್ಮಿ ಪಕ್ಷ ಶೇ 36ರಷ್ಟು ಮತ ಗಳಿಸುವ ಸಾಧ್ಯತೆಯಿದ್ದು, 25ರಿಂದ 31 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆಯಿದೆ. ಕಾಂಗ್ರೆಸ್ನ ಮತ ಗಳಿಕೆ ಪ್ರಮಾಣ ಶೇ 16ಕ್ಕೆ ಕುಸಿಯಲಿದ್ದು, ಆ ಪಕ್ಷ ಹೆಚ್ಚೆಂದರೆ 3ರಿಂದ 5 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.
ಮುಖ್ಯಮಂತ್ರಿ ಅಭ್ಯರ್ಥಿಗಳ ಪೈಕಿ ಅರವಿಂದ್ ಕೇಜ್ರಿವಾಲ್ ಅತಿ ಜನಪ್ರಿಯರಾಗಿದ್ದು, ಶೇ 35ರಷ್ಟು ಜನಬೆಂಬಲ ಪಡೆದಿದ್ದಾರೆ. ಬಿಜೆಪಿಯ ಹರ್ಷವರ್ಧನ್ ಅವರನ್ನು ಶೇ 19ರಷ್ಟು ಜನ ಬೆಂಬಲಿಸಿದ್ದಾರೆ. ಮೂರು ಅವಧಿಗೆ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರನ್ನು ಶೇ 6ರಷ್ಟು ಮಂದಿ ಮಾತ್ರ ಬೆಂಬಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.