ರಾಳೇಗಣಸಿದ್ಧಿ (ಐಎಎನ್ಎಸ್): `ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವುದಕ್ಕಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಜನವರಿಯಿಂದ 18 ತಿಂಗಳು ರಾಷ್ಟ್ರವ್ಯಾಪಿ ಪ್ರವಾಸ ಮಾಡಲು ನಿರ್ಧರಿಸಿದ್ದಾರೆ~ ಎಂದು ಅವರ ಸಹವರ್ತಿಗಳು ತಿಳಿಸಿದ್ದಾರೆ.
`ಇದೇ ದೀಪಾವಳಿ ಹಬ್ಬದಿಂದಲೇ ಪ್ರವಾಸ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಕಳೆದ ವಾರವಷ್ಟೇ ಹಜಾರೆ ಅವರು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದರಿಂದ, ಪ್ರವಾಸವನ್ನು ಒಂದೆರಡು ತಿಂಗಳು ಮುಂದೂಡಲಾಗಿದೆ~.
`ಪರಿಷ್ಕೃತ ಯೋಜನೆಯ ಪ್ರಕಾರ, ಜನವರಿಯಲ್ಲಿ ಪಟ್ನಾದ ಗಾಂಧಿ ಮೈದಾನದಿಂದ ಪ್ರವಾಸ ಆರಂಭವಾಗುತ್ತದೆ. ಪ್ರವಾಸದ ದಿನಾಂಕವನ್ನು ನಂತರ ಪ್ರಕಟಿಸಲಾಗುತ್ತದೆ~ ಎಂದು ಹೆಸರು ಹೇಳಲು ಇಚ್ಛಿಸದ ಅಣ್ಣಾ ಅವರ ಸಹವರ್ತಿಯೊಬ್ಬರು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್, ನಿತಿನ್ ಗಡ್ಕರಿ ವಿರುದ್ಧ ಮಾಡಿರುವ ಭೂ ಹಗರಣದ ಆರೋಪ ಕುರಿತು, ಹಜಾರೆ, ತಮ್ಮ ತಂಡದ ಪ್ರಮುಖರೊಡನೆ ಚರ್ಚಿಸಿ ಶೀಘ್ರದಲ್ಲೇ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಕಣ್ಣಿನ ಶಸ್ತ್ರಚಿಕಿತ್ಸೆಯ ನಂತರ ಬುಧವಾರ ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿಯಿಂದ ಆರಂಭಿಸಲಿರುವ ಭ್ರಷ್ಟಾಚಾರ ವಿರುದ್ಧದ ಒಂದೂವರೆ ವರ್ಷದ ಆಂದೋಲನದಲ್ಲಿ ನಾಗರಿಕರು, ವಿದ್ಯಾರ್ಥಿಗಳು ಸೇರಿ ಸಮಾಜದ ಎಲ್ಲ ವರ್ಗದವರನ್ನು ಸೇರಿಸಿಕೊಳ್ಳಲು ನಿರ್ಧರಿಸುವುದಾಗಿ ತಿಳಿಸಿದ್ದಾರೆ.