ನವದೆಹಲಿ: ‘ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧದ ಮೈತ್ರಿಕೂಟ ಮುನ್ನಡೆಸಲು ಅರ್ಹತೆ ದೊರೆತಂತಾಗುತ್ತದೆ’ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಸಲ್ಮಾನ್ ಖುರ್ಶಿದ್ ಅಭಿಪ್ರಾಯಪಟ್ಟಿದ್ದಾರೆ.
‘ರಾಹುಲ್ ಪಕ್ಷದ ಅಧ್ಯಕ್ಷರಾದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರೇ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂಬುದನ್ನೂ ಸೂಚಿಸುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಈ ಹಿಂದೆ ಸಂಪುಟದ ಭಾಗವಾಗಿರಲಿಲ್ಲ ಎಂಬ ಆಕ್ಷೇಪ ಬರಬಹುದು. ಆದರೆ, ಈ ಹಿಂದೆ ಸಂಪುಟದಲ್ಲಿ ಕೆಲಸ ಮಾಡದವರೂ ಪ್ರಧಾನಿಯಾದ ತಾಜಾ ಉದಾಹರಣೆ ಇದೆ’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
‘ರಾಹುಲ್ ಪಕ್ಷದ ಅಧ್ಯಕ್ಷರಾಗುವುದು ಒಂದು ರೀತಿಯಲ್ಲಿ ಉತ್ತೇಜನಕ್ಕೆ ಕಾರಣವಾಗುತ್ತದೆ. ಅದರಿಂದ ಯುವಜನರು ಪಕ್ಷದತ್ತ ಆಕರ್ಷಿತರಾಗುತ್ತಾರೆ ಮತ್ತು ಪಕ್ಷದ ಶಕ್ತಿ ಹೆಚ್ಚುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಿದ್ಧಾಂತಗಳ ನಡುವಿನ ಸಂಘರ್ಷ:ಮುಂದಿನ ಲೋಕಸಭಾ ಚುನಾವಣೆ (2019) ಸಿದ್ಧಾಂತಗಳ ನಡುವಿನ ಸಂಘರ್ಷವಾಗಿರುತ್ತದೆ ಎಂದು ಖುರ್ಷಿದ್ ಸುಳಿವು ನೀಡಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಪರ್ಯಾಯ ಶಕ್ತಿ ಅಗತ್ಯವಾಗಿದೆ. ಇದಕ್ಕಾಗಿ ಸಮಾನಮನಸ್ಕ ಜಾತ್ಯತೀತ ಶಕ್ತಿಗಳ ಜತೆ ಹೊಂದಾಣಿಕೆ ಅಗತ್ಯ ಎಂದು ಅವರು ಸಲಹೆ ಮಾಡಿದ್ದಾರೆ.
‘ಮೈತ್ರಿಕೂಟದಲ್ಲಿ ಕಾಂಗ್ರೆಸ್ ನಿಸ್ಸಂಶಯವಾಗಿ ದೊಡ್ಡ ಪಕ್ಷವಾಗಿರಲಿದ್ದು, ರಾಹುಲ್ ಮೈತ್ರಿಕೂಟ ಮುನ್ನಡೆಸಲಿದ್ದಾರೆ. ಅವರ ನಾಯಕತ್ವವನ್ನು ಎಲ್ಲರೂ ಒಪ್ಪುತ್ತಾರೆ’ ಎಂದರು.