ನವದೆಹಲಿ: ನಿಗದಿತ ಸಮಯಕ್ಕೆ ರೈಲುಗಳು ಸಂಚರಿಸದೇ ಇದ್ದರೆ ಸಂಬಂಧಿಸಿದ ಅಧಿಕಾರಿಗಳ ಬಡ್ತಿಗೆ ಸಂಚಕಾರ ತಪ್ಪಿದ್ದಲ್ಲ ಎಂದು ರೈಲ್ವೆ ಸಚಿವರು ಎಚ್ಚರಿಕೆ ನೀಡಿದ್ದಾರೆ.
ರೈಲುಗಳು ಸರಿಯಾದ ಸಮಯಕ್ಕೆ ಸಂಚರಿಸುವಂತೆ ಕ್ರಮ ಕೈಗೊಳ್ಳಲು ಎಲ್ಲ ವಲಯಗಳ ಮುಖ್ಯಸ್ಥರಿಗೆ ಒಂದು ತಿಂಗಳು ಕಾಲ ಅವಕಾಶ ನೀಡಿರುವ ರೈಲ್ವೆ ಸಚಿವ ಪೀಯೂಷ್ ಗೋಯಲ್, ‘ರೈಲುಗಳ ಸಂಚಾರದಲ್ಲಿನ ವ್ಯತ್ಯಯಕ್ಕೆ ತಕ್ಕಂತೆ ಬಡ್ತಿ, ವೇತನ ಹೆಚ್ಚಳದಲ್ಲಿಯೂ ವ್ಯತ್ಯಯವಾಗಲಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ರೈಲ್ವೆ ವಲಯಗಳ ಪ್ರಧಾನ ವ್ಯವಸ್ಥಾಪಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಚಿವ ಗೋಯಲ್, ‘ನಿರ್ವಹಣಾ ಕಾರ್ಯವೇ ರೈಲುಗಳು ತಡವಾಗಿ ಸಂಚರಿಸಲು ಕಾರಣ ಎಂಬ ನೆಪ ಹೇಳದಂತೆ ಎಚ್ಚರಿಕೆ ನೀಡಿದರು’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಕಳೆದ ತಿಂಗಳು ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಉತ್ತರ ರೈಲ್ವೆಯು ಸಮಯಪಾಲನೆಯಲ್ಲಿ ಕಳಪೆ ಸಾಧನೆ ತೋರುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರಲ್ಲದೇ, ಸಚಿವ ಗೋಯಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು’ ಎಂದು ಮೂಲಗಳು ತಿಳಿಸಿವೆ.