ನವದೆಹಲಿ: ಹಿರಿಯ ಅಧಿಕಾರಿಯೊಬ್ಬರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಏರ್ಇಂಡಿಯಾದ ಗಗನಸಖಿಯೊಬ್ಬರು ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ವಿಮಾನಯಾನ ಸಚಿವ ಸುರೇಶ ಪ್ರಭು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ.
‘ಪ್ರಕರಣ ಸಂಬಂಧ ನಿಸ್ಪಕ್ಷಪಾತವಾದ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಬೇಕು’ ಎಂದು ಸಚಿವರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಗನಸಖಿ ಮನವಿ ಮಾಡಿದ್ದಾರೆ.
ಈ ಪತ್ರಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಸುರೇಶ ಪ್ರಭು, ತುರ್ತು ಕ್ರಮಕೈಗೊಳ್ಳುವಂತೆ ಏರ್ ಇಂಡಿಯಾದ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ (ಸಿಎಂಡಿ) ಸೂಚಿಸಲಾಗಿದೆ. ಅಗತ್ಯಬಿದ್ದರೆ ಮತ್ತೊಂದು ಸಮಿತಿಯನ್ನೂ ರಚಿಸಲಾಗುವುದು ಎಂದಿದ್ದಾರೆ.
‘ಹಿರಿಯ ಅಧಿಕಾರಿ ಆರು ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆ. ನಾನು ದುಷ್ಟ ಪ್ರಾಣಿಗಿಂತಲೂ ಕೆಟ್ಟವನು ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಿದ್ದರು’ ಎಂದು ಗಗನಸಖಿ ದೂರಿದ್ದಾರೆ.
‘ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸುತ್ತಿದ್ದರು. ನಿರಾಕರಿಸಿದರೆ ಅವಮಾನ ಮಾಡುತ್ತಿದ್ದರು. ನನ್ನ ಎದುರೇ ಉಳಿದ ಮಹಿಳೆಯರಿಗೆ ಅವಾಚ್ಯವಾಗಿ ನಿಂದಿಸುತ್ತಿದ್ದರು’ ಎಂದು ಮೇ 25ರಂದು ಸಚಿವರಿಗೆ ಬರೆದ ಪತ್ರದಲ್ಲಿ ಗಗನಸಖಿ ಆರೋಪಿಸಿದ್ದಾರೆ.
‘ಅವಕಾಶ ದೊರೆತರೆ ಆ ಅಧಿಕಾರಿಯ ಹೆಸರನ್ನು ನೇರವಾಗಿ ವಿಮಾನಯಾನ ಸಚಿವರಿಗೆ ತಿಳಿಸುತ್ತೇನೆ’ ಎಂದೂ ಅವರು ಹೇಳಿದ್ದಾರೆ.
‘ಈ ಕುರಿತು ಕಳೆದ ಸೆಪ್ಟೆಂಬರ್ನಲ್ಲಿ ಏರ್ ಇಂಡಿಯಾಗೆ ಮತ್ತು ಸಿಎಂಡಿಗೆ ದೂರು ನೀಡಿದ್ದೇನೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಅವರು ಹೇಳಿದರು.