ನವದೆಹಲಿ (ಪಿಟಿಐ): ಡಿಸೆಂಬರ್ 16ರ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಪರ ವಕಾಲತ್ತು ವಹಿಸಿದ್ದ ವಕೀಲ ಎ.ಪಿ. ಸಿಂಗ್ ಅವರ ಹೇಳಿಕೆ ವಿವಾದದ ಬಿರುಗಾಳಿಯನ್ನು ಎಬ್ಬಿಸಿದೆ.
‘ನನ್ನ ಮಗಳೇನಾದರೂ ಮದುವೆಗೆ ಮೊದಲು ಲೈಂಗಿಕ ಸಂಪರ್ಕ ನಡೆಸಿದ್ದರೆ ಅಥವಾ ರಾತ್ರಿ ವೇಳೆ ಪ್ರಿಯಕರನ ಜತೆ ತಿರುಗಾಡಿದ್ದರೆ ಅವಳನ್ನು ಜೀವಂತವಾಗಿ ಸುಟ್ಟುಬಿಡುತ್ತಿದ್ದೆ’ ಎಂಬ ಸಿಂಗ್ ಅವರ ವಿವಾದಾತ್ಮಕ ಹೇಳಿಕೆಯು ಹೊಸ ರಾದ್ದಾಂತಕ್ಕೆ ಕಾರಣವಾಗಿದೆ.
ಕೆಲವು ಸ್ವಯಂ ಸೇವಾ ಸಂಘಟನೆಗಳು ಸೇರದಂತೆ ಅನೇಕ ಸಂಘ ಸಂಸ್ಥೆಗಳು ಸಿಂಗ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ದೆಹಲಿ ವಕೀಲರ ಸಂಘಕ್ಕೆ ದೂರುಗಳನ್ನು ಸಲ್ಲಿಸಿವೆ.
ಸಿಂಗ್ ಹೇಳಿಕೆಯನ್ನು ಖಂಡಿಸಬೇಕು ಎಂದು ಈ ಸಂಘಟನೆಗಳು ಒತ್ತಾಯಿಸಿವೆ. ಈ ಹಿನ್ನೆಲೆಯಲ್ಲಿ ವಕೀಲರ ಸಂಘವು ಸಿಂಗ್ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ.
ಈ ತಿಂಗಳ 20ರಂದು ನಡೆಯಲಿರುವ ವಕೀಲರ ಸಂಘದ ಆಡಳಿತ ಮಂಡಳಿಯ ಸಭೆಯಲ್ಲಿ ವಿಷಯವನ್ನು ಚರ್ಚಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸೂರ್ಯಪ್ರಕಾಶ್ ಖತ್ರಿ ತಿಳಿಸಿದ್ದಾರೆ.
ವಕೀಲ ಸಿಂಗ್ ಹೇಳಿಕೆ ವೃತ್ತಿ ದುರ್ನಡತೆಯಾಗುತ್ತದೆ ಎಂದು ಹೇಳಿದ್ದಾರೆ.
ತ್ವರಿತ ನ್ಯಾಯಾಲಯ ಮರಣದಂಡನೆ ಶಿಕ್ಷೆ ಪ್ರಕಟಿಸಿದ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತ, ‘ಪಾಲಕರು ಹೆಣ್ಣು ಮಕ್ಕಳನ್ನು ರಾತ್ರಿ ಸ್ನೇಹಿತರ ಜತೆ ಅಡ್ಡಾಡಲು ಬಿಡಬಾರದು, ನನ್ನ ಮಗಳೇನಾದರೂ ಮದುವೆಗೆ ಮೊದಲು ಲೈಂಗಿಕ ಸಂಪರ್ಕ ನಡೆಸಿದ್ದರೆ ಅಥವಾ ರಾತ್ರಿ ವೇಳೆ ಪ್ರಿಯಕರನ ಜತೆ ತಿರುಗಾಡಿದ್ದರೆ ಅವಳನ್ನು ಜೀವಂತವಾಗಿ ಸುಟ್ಟುಬಿಡುತ್ತಿದ್ದೆ’ ಎಂದು ಪರೋಕ್ಷವಾಗಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಯುವತಿಯದೇ ತಪ್ಪು ಎಂಬರ್ಥದಲ್ಲಿ ಮಾತನಾಡಿ ಸಿಂಗ್ ವಿವಾದ ಸೃಷ್ಟಿಸಿದ್ದಾರೆ.
ನ್ಯಾಯಾಂಗಕ್ಕೆ ಅವಮಾನ
ಸಾಮೂಹಿಕ ಅತ್ಯಾಚಾರವೆಸಗಿದ ನಾಲ್ವರಿಗೆ ರಾಜಕೀಯ ಒತ್ತಡದಿಂದಾಗಿ ಗಲ್ಲು ಶಿಕ್ಷೆಯಾಗಿದೆ ಎಂಬ ಅಪರಾಧಿಗಳ ಪರ ವಕೀಲ ಸಿಂಗ್ ಹೇಳಿಕೆ ನ್ಯಾಯಾಂಗವನ್ನು ಅವಮಾನಗೊಳಿಸಿದಂತೆ ಎಂದು ಕೊಲೆಗೀಡಾದ ಯುವತಿ ತಂದೆ ತಿಳಿಸಿದ್ದಾರೆ.
‘ನನ್ನ ಮಗಳಿಗಾದದ್ದು ವಕೀಲರ ಮಗಳಿಗೋ ಅಥವಾ ಸಂಬಂಧಿಕರಿಗೋ ಆಗಿದ್ದರೆ ಇದೇ ನಿಲುವನ್ನು ತಳೆಯುತ್ತಿದ್ದರೆ’ ಎಂದು ಅವರು ಪ್ರಶ್ನಿಸಿದ್ದಾರೆ.