ನವೋದಯ ವಿದ್ಯಾಲಯ ಸೇರಿದಂತೆ ದೇಶದ ಎಲ್ಲ ಶಾಲೆಗಳಿಗೂ ಡಿಸೆಂಬರ್ 25ರಂದು ಸಾರ್ವತ್ರಿಕ ರಜೆ ಇರುವುದರಿಂದ ಮುಚ್ಚಿರುತ್ತವೆ ಎಂದು ಸರ್ಕಾರ ಸ್ಪಷ್ಟಪಡಿಸಿತು. ಆದಿನ ಕ್ರಿಸ್ಮಸ್ ರಜೆ ಇದ್ದರೂ, ಉತ್ತಮ ಆಡಳಿತ ದಿನ ಆಚರಣೆಗೆ ಶಾಲೆಗಳು ತೆರೆದಿರುತ್ತವೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿಹಾಕಿತು.
ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಭಾರಿ ಗದ್ದಲ ಉಂಟಾಯಿತು. ಇದರಿಂದ ರಾಜ್ಯಸಭೆಯನ್ನು ಮೂರು ಬಾರಿ ಮುಂದೂಡಬೇಕಾಯಿತು. ಲೋಕಸಭೆಯಲ್ಲಿ ಸಚಿವ ವೆಂಕಯ್ಯ ನಾಯ್ಡು ಉತ್ತರಿಸಿ, ಕ್ರಿಸ್ಮಸ್ ದಿನ ಶಾಲೆಗಳು ತೆರೆದಿರಬೇಕೆಂದು ಸಿಬಿಎಸ್ಸಿ ಸುತ್ತೋಲೆ ಕಳುಹಿಸಿಲ್ಲ ಎಂದರು.
ನವೋದಯ ಶಾಲೆಗಳಿಗೆ ಈಗಾಗಲೇ ಕ್ರಿಸ್ಮಸ್ ರಜೆ ನೀಡಲಾಗಿದೆ. ವಸತಿ ಶಾಲೆಗಳು ತೆರೆದಿರಲಿದ್ದು ಅಲ್ಲಿನ ಮಕ್ಕಳು ಡಿ.25ರಂದು ನಡೆಯುವ ಆನ್ಲೈನ್ ಪ್ರಬಂಧ ಸ್ಪರ್ಧೆಯಲ್ಲಿ ಮುಕ್ತವಾಗಿ ಭಾಗವಹಿಸಬಹುದು. ಇದು ಐಚ್ಛಿಕವಾಗಿದ್ದು ಅವರ ಇಚ್ಛೆಗೆ ವಿರುದ್ಧವಾಗಿ ಯಾವುದೇ ಒತ್ತಡ ಹೇರುವ ಪ್ರಶ್ನೆಯೇ ಇಲ್ಲ ಎಂದರು.