ಲಖನೌ: ಸಚಿವರ ಬೆಂಗಾವಲು ಪಡೆಯ ವಾಹನ ಡಿಕ್ಕಿ ಹೊಡೆದು ಬಾಲಕನೊಬ್ಬ ಮೃತಪಟ್ಟಿದ್ದಾನೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಾಲಕನ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.
‘ಗೊಂಡಾ ಜಿಲ್ಲೆಯ ಕರ್ನಲ್ಗಂಜ್ ಪ್ರದೇಶದಲ್ಲಿ ಸಚಿವ ಓಂಪ್ರಕಾಶ್ ರಾಜಭರ್ ಅವರ ಬೆಂಗಾವಲು ವಾಹನಗಳು ಹಾದುಹೋಗುತ್ತಿದ್ದವು. ಒಂದು ವಾಹನ ತಗುಲಿ ಬಾಲಕ ನೆಲಕ್ಕುರುಳಿದ. ನಂತರ ಆತನನ್ನು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದ’ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮಹಾನಿರ್ದೇಶಕರಿಂದ ವಿವರವಾದ ವರದಿ ಕೇಳಿರುವ ಮುಖ್ಯಮಂತ್ರಿ, ಅಪಘಾತಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
‘ಅಪಘಾತ ನಡೆದ ಸಂದರ್ಭದಲ್ಲಿ ತಾವು ಬೆಂಗಾವಲು ವಾಹನಗಳೊಂದಿಗೆ ತೆರಳುತ್ತಿರಲಿಲ್ಲ. ಆಗ ನಾನು ಘಟನಾ ಸ್ಥಳದಿಂದ 25 ಕಿಲೋ ಮೀಟರ್ ದೂರದಲ್ಲಿದ್ದೆ’ ಎಂದು ಓಂ ಪ್ರಕಾಶ್ ತಿಳಿಸಿದ್ದಾರೆ.
ಕಾರು ಡಿಕ್ಕಿ ಹೊಡೆದರೂ ಬೆಂಗಾವಲು ವಾಹನದಲ್ಲಿದ್ದವರು ಬಾಲಕನಿಗೆ ನೆರವು ನೀಡಲು ಯಾರೂ ಮುಂದಾಗಲಲಿಲ್ಲ ಎಂದು ಬಾಲಕನ ಕುಟುಂಬದ ಸದಸ್ಯರು ದೂರಿದ್ದಾರೆ.