ಹೈದರಾಬಾದ್: ಮುಂಬರುವ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಸಂಸತ್ತಿನಲ್ಲಿ ಮಸೂದೆ ಮಂಡಿಸಬೇಕೆಂದು ಒತ್ತಾಯಿಸಿ ವಿವಿಧೆಡೆ ಟಿಆರ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಶುಕ್ರವಾರ ಸರದಿ ಉಪವಾಸ ಸತ್ಯಾಗ್ರಹಗಳನ್ನು ಆರಂಭಿಸಿದ್ದು ತೆಲಂಗಾಣ ರಾಜ್ಯದ ಬೇಡಿಕೆ ತೀವ್ರಗೊಂಡಿದೆ.
ಕುಕಟಪಲ್ಲಿ ಪ್ರದೇಶದಲ್ಲಿ ಸತ್ಯಾಗ್ರಹ ಶಿಬಿರ ಉದ್ಘಾಟಿಸಿದ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಪ್ರೊ. ಕೋದಂಡರಾಮ್ ಅವರು, ತಮ್ಮ ಬೇಡಿಕೆಗಳನ್ನು ಕೇಂದ್ರ ಈಡೇರಿಸುವವರೆಗೆ ನಿತ್ಯವೂ ತೆಲಂಗಾಣ ಪ್ರತ್ಯೇಕ ರಾಜ್ಯದ ಹೋರಾಟವು ತೀವ್ರ ಸ್ವರೂಪದಲ್ಲಿ ಮುಂದುವರಿಯುತ್ತದೆ ಎಂದು ಪ್ರಕಟಿಸಿದರು.
ನಾಯಕರ ಭಾವನೆಗಳನ್ನು ಪ್ರತಿಬಿಂಬಿಸುವಂತೆ ತೆಲಂಗಾಣ ಕಾರ್ಯಕರ್ತರು ತೆಲಂಗಾಣ ಭಾಗದ ನಾಲ್ಗೊಂಡ ಜಿಲ್ಲೆಯವರಾದ ಮೂಲಸೌಕರ್ಯ ಸಚಿವ ಕೋಮಟಿರೆಡ್ಡಿ ವೆಂಕಟ ರೆಡ್ಡಿ ಅವರ ಮೇಲೆ ತಮ್ಮ ಕೋಪ ಪ್ರದರ್ಶಿಸಿದ್ದಾರೆ.
ಕಾರ್ಯಕ್ರಮವೊಂದರ ಸ್ಥಳ ಪರಿಶೀಲನೆಗೆ ಸಚಿವರು ತೆರಳುತ್ತಿದ್ದಾಗ ಅದಿಲಾಬಾದ್ ಜಿಲ್ಲೆಯ ನಿರ್ಮಲ್ನಲ್ಲಿ ಟಿಆರ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಚಿವರ ಬೆಂಗಾವಲು ವಾಹನವನ್ನು ತಡೆದು ಕಲ್ಲು, ಚಪ್ಪಲಿ ಮತ್ತು ಮೊಟ್ಟೆ ಎಸೆದರು. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ತಲೆದೋರಿತ್ತು.