ನವದೆಹಲಿ (ಪಿಟಿಐ): ನೇರ ನಗದು ವರ್ಗಾವಣೆ (ಡಿಬಿಟಿ) ಯೋಜನೆಯಿಂದಾಗಿ ನಕಲಿ ಫಲಾನುಭವಿಗಳನ್ನು ಕೈಬಿಟ್ಟಿದ್ದರಿಂದ ಸಬ್ಸಿಡಿ ದರದಲ್ಲಿ ಎಲ್ಪಿಜಿ ಸಿಲಿಂಡರ್ಗಳ ವಿತರಣೆ ಪ್ರಮಾಣ ಶೇ 25ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣಿಯನ್ ಗುರುವಾರ ತಿಳಿಸಿದರು.
ಇಲ್ಲಿ ಗುರುವಾರ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದಡಿ (ಯುಎನ್ಡಿಪಿ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಿಬಿಟಿಯಿಂದಾಗಿಯೇ 2014–15ನೇ ಹಣಕಾಸು ವರ್ಷದಲ್ಲಿ ₹ 12,700 ಕೋಟಿಯಷ್ಟು ಸಬ್ಸಿಡಿ ಹೊರೆ ತಗ್ಗಿದ್ದು, ಕೇಂದ್ರಕ್ಕೆ ಭಾರಿ ಉಳಿತಾಯವಾಗಿದೆ. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿನ ಈ ಉಳಿತಾಯ ₹ 6,500 ಕೋಟಿ ಗಳಷ್ಟು ಕಡಿಮೆ ಇರಲಿದೆ ಎಂದರು.
ಉಳ್ಳವರು ಸಬ್ಸಿಡಿ ಯೋಜನೆಯಿಂದ ಹೊರಗಿರುವಂತೆ ನೋಡಿಕೊಳ್ಳುವುದು ಅಗತ್ಯ. ಇದೇ ವೇಳೆ, ನೈಜ ಫಲಾನುಭವಿಗಳು ಸಬ್ಸಿಡಿ ಪ್ರಯೋಜನದಿಂದ ವಂಚಿತರಾಗದಂತೆಯೂ ನೋಡಿಕೊಳ್ಳಬೇಕಾದ ಜವಾಬ್ದಾರಿ ಇದೆ ಎಂದು ಅವರು ಗಮನ ಸೆಳೆದರು.