ನವದೆಹಲಿ: ನೀವು ಧರಿಸಿರುವ ಸಮವಸ್ತ್ರದ ಬಗ್ಗೆ ಪ್ರಜ್ಞೆ ಇರಲಿ ಎಂದು ಪೊಲೀಸರು ಮತ್ತು ಅರೆಸೇನಾ ಪಡೆ ಅಧಿಕಾರಿಗಳಿಗೆ ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದ್ದಾರೆ.
ಗುರುವಾರ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ವಾರ್ಷಿಕ ಕಾರ್ಯ ಕ್ರಮದಲ್ಲಿ ಭಾಗವಹಿಸಿದ ಅವರು, ‘ಅಧಿಕಾರಿಗಳು ಯಾವಾಗಲೂ ಸಮವಸ್ತ್ರ ವನ್ನು ಸರಿಯಾಗಿ ಧರಿಸಿರಬೇಕು. ಅದು ಅವರ ಸ್ಥಾನಮಾನ ಮತ್ತು ಹೆಮ್ಮೆಯ ಪ್ರತೀಕ’ ಎಂದರು.
ಬಿಎಸ್ಎಫ್ ಗೀತೆಗೆ ಗೌರವ ಸಲ್ಲಿಸಲು ಅಧಿಕಾರಿಗಳು ಎದ್ದು ನಿಂತಾಗ, ಕೆಲವೇ ಅಧಿಕಾರಿಗಳು ಟೋಪಿಯನ್ನು ಸರಿಯಾಗಿ ಧರಿಸಿದ್ದರು. ಪದಕಗಳನ್ನು ಧರಿಸಿದ್ದ ಐಪಿಎಸ್ ಅಧಿಕಾರಿಯೊಬ್ಬರು ಶೂ ಲೇಸ್ ಅನ್ನು ಬಿಗಿಯಾಗಿ ಕಟ್ಟಿರಲಿಲ್ಲ.
‘ಸಚಿವರು ಶೂ ಲೇಸ್ ಬಗೆಗೂ ಮಾತನಾಡುತ್ತಾರೆ ಎಂದು ನೀವು ಹೇಳಬಹುದು. ಆದರೆ ಎಲ್ಲವನ್ನೂ ಅಚ್ಚು ಕಟ್ಟಾದ ಸ್ಥಿತಿಯಲ್ಲಿ ನೋಡಲು ನನಗೆ ಮೊದಲಿನಿಂದಲೂ ಇಷ್ಟ. ನಾನೂ ಹಾಗೆಯೇ ಇರುತ್ತೇನೆ’ ಎಂದು ಸಿಂಗ್ ಹೇಳಿದರು.
ಏಪ್ರಿಲ್ನಲ್ಲಿ ಇಲ್ಲಿ ಆಯೋಜಿಸಲಾಗಿದ್ದ ನಾಗರಿಕ ಸೇವಾ ದಿನ ಕಾರ್ಯಕ್ರಮವು ಕೆಲ ನಿಮಿಷ ತಡವಾಗಿ ಆರಂಭವಾಗಿತ್ತು. ಆಗ ಸಹ, ಅಧಿಕಾರಿಗಳು ಸಮಯಕ್ಕೆ ಮಹತ್ವ ನೀಡಬೇಕು ಎಂದು ರಾಜನಾಥ್ ಸಿಂಗ್ ಅವರು ಹೇಳಿದ್ದರು.