ವಿಲಾಸ್ಪುರ (ಪಿಟಿಐ): ಜೈಲಿನಲ್ಲಿರುವ ಮಾನವಹಕ್ಕುಗಳ ಹೋರಾಟಗಾರ ವಿನಾಯಕ ಸೆನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ ಛತ್ತೀಸ್ಗಡ ಹೈಕೋರ್ಟ್, ಈ ಸಂಬಂಧದ ತೀರ್ಪನ್ನು ಕಾಯ್ದಿರಿಸಿದೆ.
ತಮಗೆ ವಿಧಿಸಿರುವ ಜೀವಾವಧಿ ಶಿಕ್ಷೆ ವಿರುದ್ಧ ಸೆನ್ ಸಲ್ಲಿಸಿರುವ ಅರ್ಜಿಯ ಕುರಿತ ತೀರ್ಪನ್ನೂ ನ್ಯಾಯಾಲಯ ಕಾಯ್ದಿರಿಸಿದೆ. ಸೆನ್ ಅವರ ವಿರುದ್ಧ ದೇಶದ್ರೋಹ ಹಾಗೂ ಒಳಸಂಚಿನ ಅಪರಾಧಕ್ಕಾಗಿ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಬಿ.ಪಿ.ವರ್ಮಾ ಡಿ.24ರಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು.
ಇದೇ ಪ್ರಕರಣದಲ್ಲಿ ನಾರಾಯಣ ಸನ್ಯಾಲ್ ಮತ್ತು ಉದ್ಯಮಿ ಪಿಯೂಷ್ ಗುಹಾ ಅವರಿಗೂ ನಕ್ಸಲ್ ನಂಟಿನ ಆರೋಪದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು.
ನೊಬೆಲ್ ಪುರಸ್ಕೃತರ ಮನವಿ: ವಿನಾಯಕ ಸೆನ್ ಬಿಡುಗಡೆಗೆ 12 ದೇಶಗಳ 40 ನೊಬೆಲ್ ಪುರಸ್ಕೃತರ ಗುಂಪು ಮನವಿ ಮಾಡಿದೆ. ಸೆನ್ಗೆ ಶಿಕ್ಷೆ ವಿಧಿಸಿರುವುದು ಅಚ್ಚರಿ ಉಂಟುಮಾಡಿದೆ. ನಿಸ್ವಾರ್ಥಿಯಾಗಿ ಸಂಕಷ್ಟದಲ್ಲಿರುವವರಿಗೆ ಸಹಾಯಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಸೆನ್ ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ನೊಬೆಲ್ ಪುರಸ್ಕೃತರಾದ ಡಾ.ವಿ.ರಾಮಕೃಷ್ಣನ್, ಫ್ರಾಂಕೊಯಿಸ್ ಜಾಕೊಬ್, ಜೋಸೆಫ್ ಮುರ್ರೆ, ಸ್ಯಾಮುಯೆಲ್ ಬ್ಲೂಮ್ಬರ್ಗ್ ಸೇರಿದಂತೆ ಹಲವಾರು ಗಣ್ಯರು ವೆಬ್ಸೈಟ್ನಲ್ಲಿ ಮನವಿ ಪತ್ರ ಪ್ರಕಟಿಸಿದ್ದಾರೆ.