ಚೆನ್ನೈ (ಪಿಟಿಐ): ಪತಿ – ಪತ್ನಿ ನಡುವಣ ಕೌಟುಂಬಿಕ ಕಲಹ ಉದ್ಯೋಗಿಯು ಬಡ್ತಿ ಪಡೆಯುವುದಕ್ಕೆ ಅಡ್ಡಿಯಾಗದು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಚೆನ್ನೈನಲ್ಲಿರುವ ತಮಿಳುನಾಡು ಉತ್ಪಾದನೆ ಮತ್ತು ವಿತರಣೆ ನಿಗಮ (ಟಿಎಎನ್ಜಿಇಡಿಸಿಓ)ದ ಅಡಿಟ್ ವಿಭಾಗದಲ್ಲಿ ಸಹಾಯಕ ಲೆಕ್ಕಪರಿಶೋಧಕ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಎ. ವೆಲುಸ್ವಾಮಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ. ಹರಿಪರಂಥಮನ್ ಈ ಆದೇಶ ನೀಡಿದ್ದಾರೆ.
ಆಂತರಿಕ ಲೆಕ್ಕ ಪರಿಶೋಧಕ ಹುದ್ದೆಯ ಬಡ್ತಿಗೆ ತನ್ನ ಹೆಸರನ್ನೂ ಪರಿಗಣಿಸುವಂತೆ ನಿರ್ದೇಶನ ನೀಡಬೇಕು ಎಂದು ವೆಲುಸ್ವಾಮಿ ಅರ್ಜಿಯಲ್ಲಿ ಮನವಿ ಮಾಡಿದ್ದರು. ‘ಮದುವೆಗೆ ಸಂಬಂಧಿಸಿದಂತೆ ಅರ್ಜಿದಾರ ಮತ್ತು ಆತನ ಪತ್ನಿಯ ಮಧ್ಯೆ ಕೌಟುಂಬಿಕ ಕಲಹ ಇದ್ದರೆ. ಇದು ಅರ್ಜಿದಾರನ ಬಡ್ತಿಗೆ ಅಡ್ಡಿಯಾಗುವುದಿಲ್ಲ. ದ್ವಿಪತ್ನಿತ್ವ ವಿಷಯಕ್ಕೆ ಸಂಬಂಧಿಸಿದ ದೂರಿನ ವಿಚಾರಣೆ ಬಾಕಿ ಇದ್ದರೂ ಬಡ್ತಿಗೆ ಅದು ಅನ್ವಯವಾಗುವುದಿಲ್ಲ’ ಎಂದು ನ್ಯಾಯಮೂರ್ತಿಆದೇಶದಲ್ಲಿ ತಿಳಿಸಿದ್ದಾರೆ.
ವೆಲುಸ್ವಾಮಿ ಎರಡನೇ ಮದುವೆ ಮಾಡಿಕೊಂಡಿದ್ದು, ಅವರ ಹೆಸರನ್ನು ಬಡ್ತಿಗೆ ಪರಿಗಣಿಸದಂತೆ ನಿರ್ದೇಶನ ನೀಡಬೇಕು ಎಂದು ಕೋರಿ ವೇಲುಸ್ವಾಮಿ ಮೊದಲ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದರು.