ಮೈಸೂರು: ‘ರಾಜಕೀಯದ ಅನುಕೂಲಕ್ಕಾಗಿ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಅಯೋಧ್ಯೆ ರಾಮಮಂದಿರವನ್ನು ಆತುರಾತುರವಾಗಿ ಉದ್ಘಾಟಿಸಲಾಗಿದೆ. ದೇಶದ ಜನರು ಜಾತ್ಯತೀತತೆ ಒಪ್ಪಿಕೊಂಡವರು. ಸಂವಿಧಾನವೂ ಧರ್ಮ ನಿರಪೇಕ್ಷತೆಯನ್ನು ಪ್ರತಿಪಾದಿಸುತ್ತದೆ. ರಾಜಕೀಯ ದುರುದ್ದೇಶ ಹೊಂದಿರುವವರಿಗೆ ಜನರು ಪಾಠ ಕಲಿಸಲಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಐಪಿಸಿ, ಪೊಲೀಸ್ ಕಾಯ್ದೆ ಉಲ್ಲಂಘನೆಯಾಗಿದ್ದರೆ ಮಾತ್ರ ಎಫ್ಐಆರ್ ದಾಖಲಿಸಬೇಕು. ಆದರೆ, ಯಾವುದೇ ತಪ್ಪಿಲ್ಲದಿದ್ದರೂ, ರಾಹುಲ್ ಗಾಂಧಿ ಅವರ ಭಾರತ್ ಜೋಡೊ ನ್ಯಾಯ ಯಾತ್ರೆಯನ್ನು ನಿಷ್ಕ್ರಿಯಗೊಳಿಸುವ ಕೆಲಸವನ್ನು ಅಸ್ಸಾಂ ಸರ್ಕಾರ ಮಾಡುತ್ತಿದೆ. ಅದು ಅವರಿಗೆ ತಿರುಗುಬಾಣವಾಗಲಿದೆ’ ಎಂದು ಸಿದ್ದರಾಮಯ್ಯ ಹೇಳಿದರು.
‘ಕೋಮುವಾದಿ ಶಕ್ತಿಗಳ ವಿರುದ್ಧವಾಗಿ ಹೋರಾಡಲು ಇಂಡಿಯಾ ಬ್ಲಾಕ್ ರೂಪುಗೊಂಡಿದೆ. ಲೋಕಸಭೆ ಚುನಾವಣೆ ಕುರಿತು ಇನ್ನೂ ಮಾತುಕತೆಗಳು ನಡೆಯುತ್ತಿವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಜಯಪ್ರಕಾಶ್ ಹೆಗ್ಡೆ ಅವರು ಜಾತಿಗಣತಿ ವರದಿ ನೀಡಿದರೆ ಸ್ವೀಕರಿಸುತ್ತವೆ. ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದಾಗ ಕಾಂತರಾಜು ಅವರು ವರದಿ ನೀಡಲು ಬಂದಾಗ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವೀಕರಿಸಿದಂತೆ ತಡೆದರು’ ಎಂದರು.
ಕೇಂದ್ರದ ಅನುದಾನಕ್ಕಾಗಿ ರಾಜ್ಯ ಸರ್ಕಾರ ಜಂಟಿ ಖಾತೆ ಆರಂಭಿಸಬೇಕೆನ್ನುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ , ‘ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಹೋಗುವ ತೆರಿಗೆಗೂ ಜಂಟಿ ಖಾತೆ ಮಾಡುವರೇ’ ಎಂದು ವ್ಯಂಗ್ಯವಾಡಿದರು.