ತಿ.ನರಸೀಪುರ: ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗಿನ ಸೀಟು ಹಂಚಿಕೆ ವಿಚಾರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯ ಘಟಕದ ಅಧ್ಯಕ್ಷರು ನೋಡಿಕೊಳ್ಳುತ್ತಾರೆ. ನಾನು ಆಡಳಿತ ನಡೆಸುವತ್ತ ಗಮನ ಹರಿಸುತ್ತೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಸೋಮವಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ಪೊಲೀಸ್ ಸಿಬ್ಬಂದಿ ವೇತನ ಸಂಬಂಧ ಔರಾದಕರ್ ವರದಿ ಜಾರಿಗೆ ಬದ್ಧವಾಗಿದ್ದೇನೆ. ಆದರೆ, ಇಡೀ ವರದಿ ಕುರಿತು ಅಧಿಕಾರಿಗಳು ಗೊಂದಲದಲ್ಲಿದ್ದಾರೆ. ಈ ಗೊಂದಲ ನಿವಾರಿಸುವಂತೆ ಹೇಳಿದ್ದೇನೆ. ಪೊಲೀಸ್ ಸಿಬ್ಬಂದಿಗೆ ಈ ಬಗ್ಗೆ ಯಾವುದೇ ಗೊಂದಲ ಬೇಡ. ಅವರ ಬಗ್ಗೆ ಕಾಳಜಿ ಇದೆ’ ಎಂದರು.
‘ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಕುರಿತು ಸ್ಥಳೀಯ ನಾಯಕರೇ ತೀರ್ಮಾನ ಕೈಗೊಳ್ಳುತ್ತಾರೆ. ಜಿಲ್ಲೆಯೊಂದರಲ್ಲಿ ಕಾಂಗ್ರೆಸ್ ಸ್ನೇಹಿತರೇ ಅವಿಶ್ವಾಸ ಮಂಡಿಸಿದ್ದಾರೆ. ಸ್ಥಳೀಯವಾಗಿ ಹೆಚ್ಚೇನೂ ಹೇಳಲು ಆಗದು’ ಎಂದು ಹೇಳಿದರು.
‘ಪಾಕಿಸ್ತಾನವನ್ನು ಜಾಗತಿಕ ಉಗ್ರ ರಾಷ್ಟ್ರ ಎಂಬ ಘೋಷಣೆಗಿಂತ ಮೊದಲು ದೇಶದೊಳಗಿನ ಉಗ್ರವಾದವನ್ನು ಮಟ್ಟ ಹಾಕಬೇಕಿದೆ. ಉಗ್ರರಿಂದ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಿ.ಎಂ ಹೆಲಿಕಾಪ್ಟರ್ ಗೊಂದಲ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿದ್ದ ಹೆಲಿಕಾಪ್ಟರ್ ನಿಗದಿತ ಹೆಲಿಪ್ಯಾಡ್ನಲ್ಲಿ ಇಳಿಯದೆ ಅದೇ ಮೈದಾನದ ಪಕ್ಕದ ಹೆಲಿಪ್ಯಾಡ್ನಲ್ಲಿ ಇಳಿದಿದ್ದರಿಂದ ಗೊಂದಲ ಸೃಷ್ಟಿಯಾಯಿತು.
ಇದರಿಂದ ಅಧಿಕಾರಿಗಳು ಹಾಗೂ ಪೊಲೀಸರು ಗಾಬರಿಗೊಂಡರು. ಆದರೆ, ಯಾವುದೇ ತೊಂದರೆ ಆಗಲಿಲ್ಲ. ನಿಗದಿತ ಹೆಲಿಪ್ಯಾಡ್ನ ಪಕ್ಕದಲ್ಲೊಂದು ಪರ್ಯಾಯ ಹೆಲಿಪ್ಯಾಡ್ನಿರ್ಮಿಸಲಾಗಿತ್ತು. ಇಲ್ಲಿ ಹೆಲಿಕಾಪ್ಟರ್ ಸುರಕ್ಷಿತವಾಗಿ ಇಳಿದಿದೆ.