ಬೆಂಗಳೂರು: ಎರಡು ವರ್ಷಗಳಿಂದ ಶಿಮ್ಲಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೈಸೂರಿನ ಪದ್ಮಾ ಎಂಬುವರನ್ನು ಅಧಿಕಾರಿಗಳ ತಂಡವು ರಾಜ್ಯಕ್ಕೆ ವಾಪಸ್ ಕರೆತಂದಿದೆ.
ಪಿರಿಯಾಪಟ್ಟಣ ತಾಲ್ಲೂಕಿನ ಮಕನಪಳ್ಳಿ ಪಾಳ್ಯ ಕಮಲಾಪುರದ ಪದ್ಮಾ, ಮಾನಸಿಕವಾಗಿ ಅಸ್ವಸ್ಥಗೊಂಡಿದ್ದರು. ಗ್ರಾಮದಿಂದ ನಾಪತ್ತೆಯಾಗಿದ್ದ ಅವರು, ಶಿಮ್ಲಾದಿಂದ 217 ಕಿ.ಮೀ ದೂರವಿರುವ ಕಣಿವೆಯಲ್ಲಿ ಪತ್ತೆಯಾಗಿದ್ದರು. ಅವರನ್ನು ಗಮನಿಸಿದ್ದ ಪೊಲೀಸರು, ಸ್ಥಳೀಯ ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು.
ತಮ್ಮೂರು ಮೈಸೂರು ಎಂಬುದಾಗಿ ಇತ್ತೀಚೆಗಷ್ಟೇ ವೈದ್ಯರಿಗೆ ಹೇಳಿದ್ದ ಪದ್ಮಾ, ವಾಪಸ್ ಕಳುಹಿಸುವಂತೆ ಕೋರಿದ್ದರು. ಆ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮೈಸೂರಿನ ಅಧಿಕಾರಿಗಳ ತಂಡವನ್ನು ಶಿಮ್ಲಾಕ್ಕೆ ಕಳುಹಿಸಿ ಮಹಿಳೆಯು ವಾಪಸ್ ಬರುವಂತೆ ಮಾಡಿದ್ದಾರೆ.
ಅಧಿಕಾರಿಗಳ ಜತೆ ವಿಧಾನಸೌಧಕ್ಕೆ ಗುರುವಾರ ಬಂದಿದ್ದ ಮಹಿಳೆ, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದರು. ಕುಶಲೋಪರಿ ವಿಚಾರಿಸಿದ ಮುಖ್ಯಮಂತ್ರಿ, ಮಹಿಳೆಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.