ಕಾವೇರಿ ಜಲಾನಯನ ಪ್ರದೇಶಗಳಾದ ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಕೇರಳದ ವೈಯನಾಡು ಪ್ರದೇಶದಲ್ಲಿ ಸೆಪ್ಟೆಂಬರ್ನಲ್ಲೂ ವಾಡಿಕೆಯಷ್ಟು ಮಳೆ ಸುರಿದಿಲ್ಲ. ಇದರ ಪರಿಣಾಮ ಕಾವೇರಿ ಕೊಳ್ಳದ ಜಲಾಶಯಕ್ಕೆ ಒಳಹರಿವು ನಿರೀಕ್ಷೆಯಷ್ಟು ಬರುತ್ತಿಲ್ಲ. ಹಿಂದಿನ ಮೂರು ವರ್ಷಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಸೆಪ್ಟೆಂಬರ್ನಲ್ಲಿ ಭಾರಿ ಮಳೆಯಾಗಿತ್ತು. ಪರಿಣಾಮವಾಗಿ ಈ ಜಲಾನಯನ ಪ್ರದೇಶಗಳನ್ನು ಅವಲಂಬಿಸಿದ ಹಾರಂಗಿ, ಹೇಮಾವತಿ, ಕೆಆರ್ಎಸ್, ಕಬಿನಿ ಜಲಾಶಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹವಿತ್ತು. ಈ ವರ್ಷ ಪರಿಸ್ಥಿತಿ ಭಿನ್ನವಾಗಿದ್ದು ಸಮಸ್ಯೆ ಉದ್ಭವಿಸಿದೆ.