ಮಡಿಕೇರಿ: ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯಲ್ಲೇ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂಬುದು ಬಹುತೇಕರ ಹಂಬಲ. ಆದರೆ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ಅವರು ತಮ್ಮ ಪುತ್ರಿಯನ್ನು ಸರ್ಕಾರಿ ಅಂಗನವಾಡಿಗೆ ಸೇರಿಸಿ ಮಾದರಿಯಾಗಿದ್ದಾರೆ.
ನಗರದ ಎಫ್ಎಂಸಿ ಕಾಲೇಜು ಬಳಿಯ ಅಂಗನವಾಡಿಯಲ್ಲಿ ಸುಮನ್ ಅವರ ಎರಡೂವರೆ ವರ್ಷದ ಪುತ್ರಿ ಖುಷಿ, ನಲಿಯುತ್ತಾ ಕಲಿಯುತ್ತಿದ್ದಾಳೆ. ಸರ್ಕಾರಿ ಅಂಗನವಾಡಿ ಮೂಲಕ ತಮ್ಮ ಶೈಕ್ಷಣಿಕ ಬದುಕು ಆರಂಭಿಸಿದ್ದಾಳೆ. ಪ್ರತಿನಿತ್ಯ ಎಸ್ಪಿ ಅವರೇ ಮಗಳನ್ನು ಅಂಗನವಾಡಿಗೆ ಬಿಟ್ಟು ಕಚೇರಿಗೆ ತೆರಳುತ್ತಾರೆ.
‘ಶೈಕ್ಷಣಿಕ ಮೌಲ್ಯ ಅರಿಯಲು ಇಂಥ ಸರ್ಕಾರಿ ಅಂಗನವಾಡಿಗಳಿಂದ ಸಾಧ್ಯವಾಗಲಿದೆ. ಎಫ್ಎಂಸಿ ಬಳಿ ಅಂಗನವಾಡಿ ಜಿಲ್ಲೆಯಲ್ಲೇ ಮಾದರಿ ಕೇಂದ್ರವಾಗಿದೆ. ಅದೇ ಕಾರಣಕ್ಕೆ ಈ ಅಂಗನವಾಡಿಗೆ ಸೇರಿಸಿದ್ದೇನೆ’ ಎಂದು ಎಸ್ಪಿ ಪ್ರತಿಕ್ರಿಯಿಸಿದ್ದಾರೆ.