ಬೆಂಗಳೂರು: ಬೃಹತ್ ಬೆಂಗಳೂರು ಮಹಾನ ನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಶಾಲಾ-ಕಾಲೇಜು ಮತ್ತು ಕಾರ್ಖಾನೆಗಳ ಸಮಯ ಬದಲಾವಣೆ ಮಾಡಬಹುದೇ ಹೇಗೆ ಎಂಬ ಹೈಕೋರ್ಟ್ ಸೂಚನೆಯ ಅನುಸಾರ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ರಾಜ್ಯ ಸರ್ಕಾರ ,‘ಸಮಯ ಬದಲಾವಣೆ ಮಾಡಲಾಗದು’ ಎಂಬ ನಿರ್ಧಾರವನ್ನು ಹೈಕೋರ್ಟ್ಗೆ ತಿಳಿಸಿದೆ.
ಬಳ್ಳಾರಿ ರಸ್ತೆ ವಿಸ್ತರಣೆ ಕುರಿತಂತೆ, ‘ಸಮರ್ಪಣಾ ಸಾಂಸ್ಕೃತಿಕ ಮತ್ತು ಸಮಾಜ ಸೇವಾ ಸಂಘಟನೆ’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರಿ ವಕೀಲರು, ‘ವಾಹನ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಏನೆಲ್ಲಾ ಕ್ರಮ
ಕೈಗೊಳ್ಳಬಹುದು ಎಂಬ ಬಗ್ಗೆ ಈ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಶಿಕ್ಷಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಸಂಬಂಧಿಸಿದವರ ಜೊತೆ ನಡೆಸಿರುವ ಹಲವು ಸುತ್ತಿನ ಮಾತುಕತೆಗಳ ಫಲಿತಾಂಶವೂ ವರದಿಯಲ್ಲಿದೆ‘ ಎಂದು ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಜನವರಿ ಮೊದಲ ವಾರಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್, ‘ರೇಸ್ ಕೋರ್ಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಮೊದಲಿಗಿಂತಲೂ ಹೆಚ್ಚಿನ ಅಡಚಣೆಯಾಗುತ್ತಿದೆ’ ಎಂದರು. ಅಂತೆಯೇ ಸುಗಮ ವಾಹನ ಸಂಚಾರಕ್ಕೆ ಏನೇನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ನ್ಯಾಯಪೀಠಕ್ಕೆ ಕೆಲವು ಸಲಹೆಗಳ ಪಟ್ಟಿಯನ್ನು ಸಲ್ಲಿಸಿದರು.
‘ಸಂಚಾರ ದಟ್ಟಣೆ ತಪ್ಪಿಸಲು ಶಾಲೆಗಳನ್ನು ಬೇಗನೆ ಆರಂಭಿಸಿದಲ್ಲಿ ಮಕ್ಕಳಿಗೆ ನಿದ್ರೆ, ಊಟ, ಉಪಚಾರ ನಿಗದಿತ ಸಮಯಕ್ಕೆ ಆಗದೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಒಟ್ಟಾರೆ ಅಭಿಪ್ರಾಯದ ಅನುಸಾರ ಹೇಳುವುದಾದರೆ ಸದ್ಯ ಇರುವ ಶಾಲಾ ಸಮಯದಲ್ಲಿ ಯಾವುದೇ ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆಯು ಕೇವಲ ಶಾಲಾ ಸಮಯದ ದೆಸೆಯಿಂದ ಉಂಟಾಗುವುದಿಲ್ಲ. ದಟ್ಟಣೆಯ ವೇಳೆ ಕಚೇರಿ, ಕೈಗಾರಿಕೆ ಮತ್ತು ಇತರೆಡೆ ತೆರಳುವ ವಾಹನಗಳ ದೆಸೆಯಿಂದಲೂ ಉಂಟಾಗುತ್ತದೆ‘ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ.
* ‘ಕೈಗಾರಿಕಾ ಸಂಘಟನೆಗಳ ಜತೆ ವಿಸ್ತೃತ ಮಾತುಕತೆ ನಡೆಸಿದ ಬಳಿಕ ಹೊರಹೊಮ್ಮಿದ ಅಭಿಪ್ರಾಯದ ಅನುಸಾರ ಕಾರ್ಖಾನೆಗಳಿಂದ ವಾಹನ ದಟ್ಟಣೆ ಉಂಟಾಗುತ್ತಿಲ್ಲ. ಹಾಗಾಗಿ ಬದಲಾವಣೆ ಅಗತ್ಯವಿಲ್ಲ‘ ಎಂದು ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ವರದಿಯಲ್ಲಿ ತಿಳಿಸಿದ್ದಾರೆ.
* ಕಾರ್ಖಾನೆಗಳ ಸಿಬ್ಬಂದಿಯ ಕಾರ್ಯ ನಿರ್ವಹಣೆಯಿಂದ ವಾಹನ ದಟ್ಟಣೆ ಉಂಟಾಗುತ್ತಿಲ್ಲ. ಅವರು ಬೆಳಿಗ್ಗೆ 6ರಿಂದ 9ರ ಅವಧಿಯಲ್ಲಿ ಪ್ರಯಾಣ ಮಾಡುತ್ತಾರೆ ಮತ್ತು ಸಂಜೆಯ ನಂತರ ದುಡಿಯುವ ಸ್ಥಳದಿಂದ ಮನೆಗೆ ಮರಳುತ್ತಾರೆ.
* ಹೊರವರ್ತುಲ ರಸ್ತೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಕಂಪನಿಗಳು ಹೈಬ್ರೀಡ್ ಮಾದರಿಯನ್ನು ಅಳವಡಿಸಿಕೊಳ್ಳುವುದನ್ನು ಉತ್ತೇಜಿಸಬೇಕು. ಇದರಿಂದ ರಸ್ತೆಗಳಲ್ಲಿನ ಸಂಚಾರ ದಟ್ಟಣೆ ತಗ್ಗುವುದಲ್ಲದೆ, ಕಚೇರಿಗೆ ಆಗಮಿಸುವ ಸಿಬ್ಬಂದಿಯ ಸಂಖ್ಯೆಯಲ್ಲಿ ಇಳಿಮುಖವಾಗುತ್ತದೆ.
* ಕಾರ್ಖಾನೆಗಳ ಸಮಯ ಬದಲಾವಣೆಯಿಂದ ಸಂಚಾರ ದಟ್ಟಣೆ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ.
* ಶಾಲಾ ಆವರಣದ ಒಳಗೆ ವಾಹನ ನಿಲುಗಡೆಗೆ ಅವಕಾಶ ಒದಗಿಸಲು ಸಾಧ್ಯವಿರದೇ ಇರುವ ಶಾಲೆಗಳ ಸಮೀಪ ನಿರ್ದಿಷ್ಟ ಪಿಕ್ ಅಪ್ ಮತ್ತು ಡ್ರಾಪ್ ಪಾಯಿಂಟ್ಗಳನ್ನು ನಿಗದಿ ಮಾಡುವುದು.
* ಶಾಲೆಗಳ ಸಮೀಪದಲ್ಲಿ ಶಾಲಾ ಆರಂಭ ಮತ್ತು ಮುಕ್ತಾಯದ ವೇಳೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮತ್ತು ಸ್ವಪ್ರೇರಣೆಯಿಂದ ಬರುವ ಪಾಲಕರನ್ನು ಸಂಚಾರಿ ವಾರ್ಡನ್ಗಳನ್ನಾಗಿ ನೇಮಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುವುದು.
* ಹೆಚ್ಚಿನ ವಾಹನ ದಟ್ಟಣೆ ಉಂಟಾಗುವ ಶಾಲೆಗಳ ಸುತ್ತಮುತ್ತ ‘ಲೋಕಲ್ ಏರಿಯಾ ಟ್ರಾಫಿಕ್ ಮ್ಯಾನೇಜ್ಮೆಂಟ್ ಪ್ಲಾನ್’ ಜಾರಿಗೊಳಿಸುವುದು.
* ಪೋಷಕರು ಮಕ್ಕಳನ್ನು ಶಾಲೆಗೆ ತಲುಪಿಸಲು ಮತ್ತು ಕರೆತರಲು ಸ್ವಂತ ವಾಹನ ಬಳಸುವುದನ್ನು ತಪ್ಪಿಸಲು 3-4 ಶಾಲೆಗಳಿಗೆ ಒಟ್ಟುಗೂಡಿ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಬಿಎಂಟಿಸಿ ಬಸ್ ಸೇವೆ ಒದಗಿಸುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.