ಚಿತ್ರದುರ್ಗ/ಚಿಕ್ಕಮಗಳೂರು/ಶಿವಮೊಗ್ಗ: ಚಿತ್ರದುರ್ಗ ನಗರ ಸೇರಿ ಜಿಲ್ಲೆಯ ಕೆಲ ಭಾಗಗಳಲ್ಲಿ ಶುಕ್ರವಾರ ಗುಡುಗು, ಸಿಡಿಲು ಸಹಿತ ಬಿರುಸಿನ ಮಳೆಯಾಗಿದ್ದರೆ, ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಬೇಸಿಗೆಯ ಬಿರು ಬಿಸಿಲಿನಿಂದ ಬಸವಳಿದಿದ್ದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.
ಚಿಕ್ಕಜಾಜೂರಿನಲ್ಲಿ ಆಲಿಕಲ್ಲು ಮಳೆ ಸುರಿದಿದ್ದು, ಜನರು ಹರ್ಷ ವ್ಯಕ್ತಪಡಿಸಿದರು. ಬಿರುಗಾಳಿಗೆ ನೂರಾರು ಅಡಿಕೆ ಹಾಗೂ ತೆಂಗಿನ ಮರಗಳು, ವಿದ್ಯುತ್ ಕಂಬಗಳು ಬಿದ್ದಿವೆ. ಚಿತ್ರದುರ್ಗ ನಗರದಲ್ಲಿ 15 ನಿಮಿಷಗಳ ಕಾಲ ಜೋರಾಗಿ ಮಳೆ ಸುರಿಯಿತು.
ಶಿವಮೊಗ್ಗ ಜಿಲ್ಲೆಯ ಬಹುತೇಕ ಕಡೆ ಮಳೆಯಾಗಿದ್ದು ನಗರದಲ್ಲಿ ಅರ್ಧ ಗಂಟೆ ಉತ್ತಮ ಮಳೆ ಸುರಿಯಿತು. ಶಿಕಾರಿಪುರ, ರಿಪ್ಪನ್ಪೇಟೆ, ಕೋಣಂದೂರು, ಸೊರಬ ಸುತ್ತಮುತ್ತ ಮಳೆಯಾಗಿದೆ.
ದಾವಣಗೆರೆಯ ಹಲವೆಡೆ ಮಳೆ: ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ತ್ಯಾವಣಿಗೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಉತ್ತಮ ಮಳೆಯಾಗಿದೆ. ದಾವಣಗೆರೆ ನಗರದಲ್ಲಿ ಬಿರುಗಾಳಿ, ಗುಡುಗು ಸಮೇತ ಸಾಧಾರಣ ಮಳೆ ಸುರಿಯಿತು. ಉತ್ತಮ ಮಳೆಯಾಗಿದ್ದರಿಂದ ಅನ್ನದಾತರು ಸಂಭ್ರಮಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಆಲ್ದೂರು ಸುತ್ತಮತ್ತ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ಬಿಸಿಲಿನಲ್ಲಿ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದ ಕಾಫಿ ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದಾರೆ.
ಮಾವಿನಗುಣಿ, ಆಲ್ದೂರು, ಅರೇನೂರು, ಕೆಳಗೂರು, ಶಂಕರ್ ಫಾಲ್ಸ್ ಸುತ್ತಮುತ್ತ ಮಳೆಯಾಗಿದೆ. ಕಾಫಿ ಗಿಡಗಳಲ್ಲಿ ಮೊಗ್ಗು ಅರಳಿ ಕಾಯಿ ಕಟ್ಟುವಿಕೆಗೆ ಈ ಮಳೆ ಅನುಕೂಲವಾಗಿದೆ. ಎನ್.ಆರ್.ಪುರ, ಬಾಳೆಹೊನ್ನೂರು ಸುತ್ತಮುತ್ತ ಗುಡುಗು ಸಹಿತ ಸಾಧಾರಣ ಮಳೆ ಸುರಿಯಿತು. ಚಿಕ್ಕಮಗಳೂರು ನಗರ, ಕಡೂರು, ತರೀಕೆರೆ ಸುತ್ತಮುತ್ತ ತುಂತುರ ಮಳೆ ಸುರಿದು ತಂಪೆರೆಯಿತು. ಗುರುವಾರ ರಾತ್ರಿ ಎನ್.ಆರ್.ಪುರ ತಾಲ್ಲೂಕಿನ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಸಾಲು –ಸಾಲು ಮರಗಳು, ವಿದ್ಯುತ್ ಕಂಬಗಳು ಉರುಳಿವೆ. ಬಾಳೆ ತೋಟವೊಂದು ಸಂಪೂರ್ಣ ಹಾಳಾಗಿದೆ.
ಸಿಡಿಲು ಬಡಿದು ಇಬ್ಬರ ಸಾವು (ಬೀದರ್ ವರದಿ):
ಬೀದರ್ ತಾಲ್ಲೂಕು ಹಾಗೂ ಔರಾದ್ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಶುಕ್ರವಾರ ಮಳೆಯಾಗಿದೆ.
ಬೀದರ್ ತಾಲ್ಲೂಕಿನ ಬರೂರ ಗ್ರಾಮದ ಜಮೀನಿನಲ್ಲಿ ಮಧ್ಯಾಹ್ನ ಪುಷ್ಪಲತಾ ರವೀಂದ್ರ ರೆಡ್ಡಿ (50) ಅವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಔರಾದ್ ತಾಲ್ಲೂಕಿನ ಚಿಕ್ಲಿ (ಜೆ) ತಾಂಡಾ ನಿವಾಸಿ ಭೀಮಲಾ (70) ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ತಾಲ್ಲೂಕಿನ ಚಿಂತಾಕಿ ಹಾಗೂ ವಡಗಾಂವ್ ಹೋಬಳಿಯಲ್ಲಿ ಸಂಜೆ ಗಾಳಿ ಸಹಿತ ಮಳೆಯಾಗಿದೆ. ಬೀದರ್, ಭಾಲ್ಕಿ ತಾಲ್ಲೂಕಿನಲ್ಲಿ ಶುಕ್ರವಾರ ಮಧ್ಯಾಹ್ನ ಕೆಲ ಕಾಲ ತುಂತುರು ಮಳೆಯಾಗಿದೆ. ಕಲಬುರಗಿ ನಗರದಲ್ಲಿ ಬೆಳಗಿನ ಜಾವ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದು, ವಾತಾವರಣವನ್ನು ತುಸು ತಂಪು ಮಾಡಿದೆ. ಚಿಂಚೋಳಿ, ಆಳಂದದಲ್ಲೂ ಕೆಲ ಕಾಲ ಮಳೆಯಾಗಿದೆ.
ಮೈಸೂರು: ಮೈಸೂರು ಭಾಗದ ಕೊಡಗು, ಚಾಮರಾಜನಗರ, ಹಾಸನ ಮತ್ತು ಮಂಡ್ಯದಲ್ಲಿ ಶುಕ್ರವಾರ ಕೆಲಹೊತ್ತು ಗುಡುಗು ಸಹಿತ ಮಳೆಯಾಯಿತು. ಮಳೆ ನಿರೀಕ್ಷೆಯಲ್ಲಿದ್ದ ರೈತರಲ್ಲಿ ಹರ್ಷ ಮೂಡಿತು.
ಕೊಡಗು ಜಿಲ್ಲೆಯ ನಾಪೋಕ್ಲು ಪಟ್ಟಣದ ಸುತ್ತಮುತ್ತ, ಬೇತು, ಕೊಟ್ಟಮುಡಿ, ಬಲಮುರಿ, ಪಾಲೂರು ಸೇರಿದಂತೆ ಹಲವೆಡೆ ಸುಮಾರು 30 ನಿಮಿಷಗಳ ಕಾಲ ಮಳೆ ಸುರಿಯಿತು. ಬೇತು ಗ್ರಾಮ ವ್ಯಾಪ್ತಿಯಲ್ಲಿ 2 ಸೆಂ.ಮೀ ಮಳೆಯಾಗಿದೆ. ಸುಂಟಿಕೊಪ್ಪ ವ್ಯಾಪ್ತಿಯಲ್ಲಿಯೂ ಮಳೆಯಾಯಿತು. ಮಳೆಯಿಂದಾಗಿ ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಗೆ ಅಡ್ಡಿಯಾಯಿತು. ಸಮೀಪದ ಪಾಲೂರು ಗ್ರಾಮದಲ್ಲಿ ವಾರ್ಷಿಕ ಉತ್ಸವದ ನೃತ್ಯಬಲಿಯನ್ನು ಮಳೆಯಲ್ಲಿಯೇ ಗ್ರಾಮಸ್ಥರು ನೆರವೇರಿಸಿದರು.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಕೇಂದ್ರ ಸ್ಥಾನ ಸೇರಿದಂತೆ ತಾಲ್ಲೂಕಿನ ಪಾರೆಕೊಪ್ಪಲು, ಅಂಕನಹಳ್ಳಿ, ಕಿರನಲ್ಲಿ, ಹರವೆ ಮಲ್ಲರಾಜ ಪಟ್ಟಣ, ಹುಣಸೇಕುಪ್ಪೆ, ಮೆಲ್ಲಹಳ್ಳಿ, ಹುಣಸೂರು ತಾಲ್ಲೂಕಿನ ಹನಗೋಡಿನಲ್ಲಿ ಬಿರುಸು ಮಳೆಯಾಯಿತು. ಶುಂಠಿ, ತಂಬಾಕು, ಬಾಳೆ, ರಾಗಿ ಬೆಳೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದ್ದರಿಂದ ರೈತರಲ್ಲಿ ಹರ್ಷ ಮೂಡಿತು. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಹತ್ತು ನಿಮಿಷಗಳ ಕಾಲ ಮಳೆಯಾಯಿತು.
ಮಂಡ್ಯ ಜಿಲ್ಲೆಯ ನಾಗಮಂಗಲ ಹಾಗೂ ಸುತ್ತಮುತ್ತ ಹಳ್ಳಿಗಳಲ್ಲಿ ಗುಡುಗು ಮಿಂಚು ಸಹಿತ ಸುಮಾರು ಒಂದು ಗಂಟೆ ಸುರಿದ ಮಳೆಯಿಂದ ಸಂಭ್ರಮಿಸಿದರು. ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸುರಿಯುವ ಮಳೆಯ ನಡುವೆಯೇ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಜನ ಪಾಲ್ಗೊಂಡರು. ಚನ್ನರಾಯ ಪಟ್ಟಣ, ಹಾಸನ, ಮೈಸೂರು ನಗರದಲ್ಲೂ ಮಳೆಯಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.