ಬೆಂಗಳೂರು: ಬಜೆಟ್ನಲ್ಲಿ ಮಾಡಿದ ಘೋಷಣೆಯಂತೆ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹಾಗೂ ಅಂಗನವಾಡಿ ಕೇಂದ್ರಗಳ ಬಾಡಿಗೆಯನ್ನು ಹೆಚ್ಚಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದರು.
ಸೋಮವಾರ ವಿಕಾಸಸೌಧದಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಬಗ್ಗೆ ಇತ್ತೀಚೆಗೆ ಆದೇಶ ಹೊರಡಿಸಲಾಗಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ₨ 500, ಸಹಾಯಕಿಯರಿಗೆ ₨ 250, ಮಿನಿ ಅಂಗನವಾಡಿ ಕಾರ್ಯಕರ್ತೆ ಯರಿಗೆ ₨ 250 ಹೆಚ್ಚಳ ಮಾಡಲಾಗಿದೆ.
ಪೌಷ್ಟಿಕ ಆಹಾರ ಘಟಕ ವೆಚ್ಚ ಹೆಚ್ಚಳ: ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಡಿ ಬಳ್ಳಾರಿ, ಗುಲ್ಬರ್ಗಾ, ಬಾಗಲಕೋಟೆ ಮತ್ತು ಕೋಲಾರ ಜಿಲ್ಲೆಗಳ ಪೌಷ್ಟಿಕ ಆಹಾರ ಘಟಕಗಳ ವೆಚ್ಚ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.
6 ತಿಂಗಳಿಂದ 72 ತಿಂಗಳ ಪ್ರತಿ ಮಗುವಿನ ವೆಚ್ಚ ದಿನಕ್ಕೆ ₨4 ರಿಂದ ₨ 6ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ ತೀರ ಅಪೌಷ್ಟಿಕತೆಯ ಮಕ್ಕಳ ವೆಚ್ಚವನ್ನು ದಿನಕ್ಕೆ ₨ 6 ರಿಂದ ದಿನಕ್ಕೆ ₨9 ಕ್ಕೆ ಹೆಚ್ಚಿಸಲಾಗಿದೆ. ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡಲಾಗುವ ವೆಚ್ಚ ದಿನಕ್ಕೆ ₨ 5 ರಿಂದ ದಿನಕ್ಕೆ ₨7ಕ್ಕೆ ಪರಿಷ್ಕರಿಸಿ ಅದೇಶ ಹೊರಡಿಸಲಾಗಿದೆ. ಇನ್ನೂ ೮ ಜಿಲ್ಲೆಗಳಲ್ಲಿ ಈ ರೀತಿಯ ವೆಚ್ಚ ಹೆಚ್ಚಳಕ್ಕೆ ಮಂಜೂರಾತಿ ದೊರಕಿದ್ದು, ಸದ್ಯದಲ್ಲೇ ಆದೇಶ ಹೊರಡಿಸ ಲಾಗುವುದು ಎಂದು ಸಚಿವರು ತಿಳಿಸಿದರು.