ಶ್ರೀನಿವಾಸಪುರ: ತಾಲ್ಲೂಕಿನ ಜೋಡಿಕೊತ್ತಪಲ್ಲಿ ಗ್ರಾಮದ ಸಮೀಪ ಬೆಂಗಳೂರಿನಿಂದ ಆಂಧ್ರಪ್ರದೇಶದ ಮದನಪಲ್ಲಿಗೆ ಹೋಗುತ್ತಿದ್ದ ಖಾಸಗಿ ಬಸ್ ಉರುಳಿ ಬಿದ್ದು 7 ಜನ ಸ್ಥಳದಲ್ಲೇ ಮೃತಪಟ್ಟು 20ಕ್ಕೂ ಹೆಚ್ಚು ಜನ ತೀವ್ರ ಗಾಯಗೊಂಡಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ನೆಲೆಸಿರುವ ಈ ಕಡೆಯ ನಿವಾಸಿಗಳು ಯುಗಾದಿ ಹಬ್ಬಕ್ಕೆ ತಮ್ಮ ಗ್ರಾಮಗಳಿಗೆ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ರಾತ್ರಿ 7.30ರ ಸಮಯದಲ್ಲಿ ಶ್ರೀನಿವಾಸಪುರದಿಂದ ಮದನಪಲ್ಲಿಗೆ ಹೋಗುತ್ತಿದ್ದ ಇನ್ನೊಂದು ಖಾಸಗಿ ಬಸ್ಸನ್ನು ಹಿಂದಕ್ಕೆ ಹಾಕುವ ಪ್ರಯತ್ನದಲ್ಲಿ ಈ ಘಟನೆ ಸಂಭವಿಸಿದೆ.
ಪ್ರಯಾಣಿಕರು ಬಸ್ಸಿನ ಒಳಗಡೆ ಮಾತ್ರವಲ್ಲದೆ, ಮೇಲ್ಭಾಗದಲ್ಲೂ ಕುಳಿತು ಪ್ರಯಾಣಿಸುತ್ತಿದ್ದರು. ಬಸ್ ಮಗುಚಿ ಬೀಳುತ್ತಲೇ ಮೇಲೆ ಕುಳಿತಿದ್ದ ಪ್ರಯಾಣಿಕರು ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡರು, ಕೆಲವರು ಸ್ಥಳದಲ್ಲಿಯೇ ಮೃತಪಟ್ಟರು.