ಬೆಂಗಳೂರು: ಕೆ.ಎ.ಎಸ್. ಯೇತರ ಅಧಿಕಾರಿಗಳಿಗೆ ಐ.ಎ.ಎಸ್.ಗೆ ಬಡ್ತಿ ನೀಡುವ ಸಂಬಂಧದ ಆಯ್ಕೆ ಪ್ರಕ್ರಿಯೆ ಕುರಿತಂತೆ ಕೇಂದ್ರ ಆಡಳಿತ ನ್ಯಾಯಮಂಡಳಿಯು ತೀರ್ಪನ್ನು ಶುಕ್ರವಾರ ಕಾಯ್ದಿರಿಸಿದೆ.ಆಯ್ಕೆ ಪ್ರಕ್ರಿಯೆಗೆ ಇದೇ 1ರಂದು ನ್ಯಾಯಮಂಡಳಿಯು ತಡೆ ನೀಡಿತ್ತು. ಈ ತಡೆಯಾಜ್ಞೆ ತೆರವಿಗೆ ಕೋರಿ ವಿ.ಪಿ.ಇಕ್ಕೇರಿ, ಡಾ.ಜಿ.ಸಿ.ಪ್ರಕಾಶ್ ಹಾಗೂ ಇತರರು ನ್ಯಾಯಮಂಡಳಿ ಮೊರೆ ಹೋಗಿದ್ದು, ಇದರ ತೀರ್ಪನ್ನು ಕಾಯ್ದಿರಿಸಲಾಗಿದೆ.
ಖಾಲಿ ಇರುವ ಮೂರು ಸ್ಥಾನಗಳಿಗೆ 1:5ರ ಅನುಪಾತದಲ್ಲಿ 15 ಮಂದಿ ಅಧಿಕಾರಿಗಳ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸಿತ್ತು. ಇದು ವೆುರಿಟ್ ಮತ್ತು ಅರ್ಹತೆ ಮೇಲೆ ಸಿದ್ಧಗೊಂಡಿಲ್ಲ ಎಂದು ಆಕಾಂಕ್ಷಿಗಳಾದ ಸಾರಿಗೆ ಇಲಾಖೆಯ ರಿಚರ್ಡ್ ಡಿಸೋಜಾ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಡಾ.ಕೆ.ಎನ್. ವಿಜಯ್ ಪ್ರಕಾಶ್ ಅವರು ನ್ಯಾಯಮಂಡಳಿ ಮುಂದೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ತಡೆ ನೀಡಲಾಗಿತ್ತು.