ಬೆಂಗಳೂರು: ಗೋವಾದ ಬೈನಾ ಬೀಚ್ನಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರಾದ ಕನ್ನಡಿಗರಿಗೆ ಪುನರ್ ವಸತಿ ಕಲ್ಪಿಸಲು ಆರ್ಥಿಕ ನೆರವು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಗೋವಾ ಸರ್ಕಾರ ಇತ್ತೀಚೆಗೆ ಒತ್ತುವರಿ ತೆರವು ನೆಪದಲ್ಲಿ ಕನ್ನಡಿಗರ ಮನೆಗಳನ್ನು ನೆಲಸಮಗೊಳಿಸಿತ್ತು. ಈ ಸಂಬಂಧ ಮುಖ್ಯಮಂತ್ರಿ ಸೂಚನೆಯಂತೆ ಅಲ್ಲಿಗೆ ತೆರಳಿದ್ದ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬೂರಾವ್ ಚಿಂಚನಸೂರ, ಅಲ್ಲಿನ ಪರಿಸ್ಥಿತಿ ಕುರಿತ ವರದಿಯನ್ನು ಮಂಗಳವಾರ ಸಲ್ಲಿಸಿದರು.
‘ಗೋವಾದಲ್ಲಿ ಕೆಳವರ್ಗದ ಬಡ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿದೆ. ಸಣ್ಣಪುಟ್ಟ ವ್ಯಾಪಾರ ಮಾಡುವವರ ಮನೆಗಳನ್ನು ನೆಲಸಮ ಮಾಡಲಾಗಿದೆ. ಅಲ್ಲಿನ ಸರ್ಕಾರದ ಜೊತೆ ಮಾತುಕತೆ ನಡೆಸಿ ಕನ್ನಡಿಗರಿಗೆ ರಕ್ಷಣೆ ನೀಡಲು ಕರ್ನಾಟಕ ಸರ್ಕಾರ ಆಸಕ್ತಿ ತೋರಬೇಕು’ ಎಂದು ಚಿಂಚನಸೂರ ಸಲಹೆ ನೀಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಗೋವಾ ಸರ್ಕಾರ ಜಾಗ ನೀಡಿದರೆ ಕನ್ನಡಿಗರಿಗೆ ಮನೆ ಕಟ್ಟಿ ಕೊಡಲು ಆರ್ಥಿಕ ನೆರವು ನೀಡಲು ಬದ್ಧ. ಈ ಬಗ್ಗೆ ಸಚಿವರ ನಿಯೋಗವನ್ನು ಗೋವಾಕ್ಕೆ ಕಳುಹಿಸಲಾಗುವುದು’ ಎಂದರು.