ಬೀದರ್: ಗ್ರಾಮ ಪಂಚಾಯಿತಿಯ ಜನಸಂಖ್ಯೆಯ ಆಧಾರದ ಮೇಲೆ ಅನುದಾನ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಜಗದೀಶ ಶೆಟ್ಟರ್ ಭರವಸೆ ನೀಡಿದರು.
ಇಲ್ಲಿ ಮಂಗಳವಾರ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಪ್ರಥಮ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ~ಬಜೆಟ್ನಲ್ಲಿ ಜನಸಂಖ್ಯೆ ಆಧಾರದಲ್ಲಿ ಮೂರು ರೀತಿಯಲ್ಲಿ ಅಂದರೆ ಅನುದಾನವನ್ನು 9, 12, 15 ಲಕ್ಷ ರೂ.ು ಹೆಚ್ಚಿಸಲು ಶಕ್ತಿಮೀರಿ ಪ್ರಯತ್ನಿಸಲಾಗುತ್ತದೆ~ ಎಂದು ಹೇಳಿದರು.
ಹಿಂದೆ ಪ್ರತಿ ಗ್ರಾಮ ಪಂಚಾಯಿತಿಗೂ ತಲಾ ಆರು ಲಕ್ಷ ಅನುದಾನ ನೀಡಲಾಗುತ್ತಿತ್ತು. ಕಳೆದ ವರ್ಷದ ಬಜೆಟ್ನಲ್ಲಿ ಅದನ್ನು ಎಂಟು ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗೆ ~ಅನುದಾನ ಇಲ್ಲ~ ಎಂಬ ಅಭಿಪ್ರಾಯ ಇತ್ತು. ಆದ್ದರಿಂದ ಕಳೆದ ವರ್ಷದ ಬಜೆಟ್ನಲ್ಲಿ ಜಿಲ್ಲಾ ಪಂಚಾಯಿತಿಗೆ ಒಂದು ಕೋಟಿ ರೂಪಾಯಿ ವಿಶೇಷ ಅನುದಾನ ಪ್ರಕಟಿಸಲಾಗಿತ್ತು. ಹಾಗೆಯೇ ಪ್ರತಿ ತಾಲ್ಲೂಕು ಪಂಚಾಯಿತಿಗೂ ಒಂದು ಕೋಟಿ ನೀಡಲಾಗಿತ್ತು. ಬರಲಿರುವ ಬಜೆಟ್ನಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಅನುದಾನವನ್ನು ಎರಡು ಕೋಟಿಗೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತದೆ ಎಂದರು.
ಬಹಳಷ್ಟು ದಿನಗಳಿಂದ ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಹಾಗೂ ಭತ್ಯೆ ಹೆಚ್ಚಳ ಆಗದೇ ಇರುವುದರಿಂದ ಅದನ್ನು ಹೆಚ್ಚಿಸುವ ಅಗತ್ಯವಿದೆ. ರಾಜ್ಯದಲ್ಲಿ ಒಟ್ಟು 90 ಸಾವಿರ ಗ್ರಾಮ ಪಂಚಾಯಿತಿ ಸದಸ್ಯರು ಇರುವುದರಿಂದ ಹಣಕಾಸು ಇಲಾಖೆ ಅಪಸ್ವರ ಎತ್ತುವ ಸಾಧ್ಯತೆಗಳಿವೆ. ಆದರೂ, ಗೌರವಧನ ಮತ್ತು ಭತ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.