ಬಳ್ಳಾರಿ: ‘ಅಭಿವೃದ್ಧಿ ಅಂದ್ರೆ ಏನು? ಬಳ್ಳಾರಿಯಿಂದ ಹೈದರಾಬಾದ್ಗೆ ಒಂದು ಫ್ಲೈಟ್ ಬಿಟ್ರೆ ಅಭಿವೃದ್ಧಿ ಆಗುತ್ತಾ? ಇವೆಲ್ಲ ಬೂಟಾಟಿಕೆ. ಪ್ರಧಾನಿ ಮೋದಿ ಬಾಂಬೆ ಮಿಠಾಯಿ ಕತೆ ಹೇಳುತ್ತಾರೆ ಅಷ್ಟೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ನಗರದಲ್ಲಿ ಶುಕ್ರವಾರ ವೀರಶೈವ ವಿದ್ಯಾವರ್ಧಕ ಸಂಘದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಡವರಿಗೆ ಕೇಂದ್ರ ಸರ್ಕಾರ ಏನು ಸಹಾಯ ಮಾಡಿದೆ? ಅಭಿವೃದ್ಧಿ ಪದದ ಅರ್ಥ ಗೊತ್ತೇನ್ರಿ ಅವರಿಗೆ? ಅವರ ಬಗ್ಗೆ ಮಾತಾಡೋದು ಬೇಡ ಬಿಡ್ರಿ’ ಎಂದರು.
‘ಸಚಿವ ಡಿ.ಕೆ ಶಿವಕುಮಾರ ಮತ್ತು ಪಕ್ಷದ ಮಧ್ಯೆ ಭಿನ್ನಾಭಿಪ್ರಾಯವಿಲ್ಲ. ಬಿಬಿಎಂಪಿ ಚುನಾವಣೆಯಲ್ಲಿ ತಮ್ಮ ಕ್ಷೇತ್ರದವರನ್ನು ಪರಿಗಣಿಸುವಂತೆ ಅವರ ಸಹೋದರ ಡಿ.ಕೆ ಸುರೇಶ್ ಕೇಳಿದ್ದಾರಷ್ಟೇ’ ಎಂದು ಪ್ರತಿಕ್ರಿಯಿಸಿದರು.