ಚಿತ್ರದುರ್ಗ: ರೈತಸಂಘದ ಎರಡು ಬಣಗಳನ್ನು ಒಗ್ಗೂಡಿಸುವ ಕುರಿತ ಅಂತಿಮ ನಿರ್ಧಾರ ಫೆ.10ರಂದು ಹೊರಬೀಳುವ ನಿರೀಕ್ಷೆಯಿದೆ.
ಮಂಗಳವಾರ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ಸಮ್ಮುಖದಲ್ಲಿ ನಡೆದ ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಕೆ.ಎಸ್. ಪುಟ್ಟಣ್ಣಯ್ಯ ನಡುವೆ ಗೌಪ್ಯವಾಗಿ ನಡೆದಿರುವ ಮಾತುಕತೆ ವೇಳೆ ಈ ವಿಷಯ ಚರ್ಚೆಗೆ ಬಂದಿದೆ.
ಈ ಬಗ್ಗೆ ರೈತಸಂಘ ರಾಜ್ಯ ಘಟಕದ ಅಧ್ಯಕ್ಷ ಪುಟ್ಟಣ್ಣಯ್ಯ, ಮುರುಘಾ ಶರಣರ ಆಶಯದ ಹಿನ್ನೆಲೆಯಲ್ಲಿ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಜತೆ ಮಾತುಕತೆ ನಡೆದಿದ್ದು, ಈ ಬಗ್ಗೆ ಜ. 29ರಂದು ನಡೆಯಲಿರುವ ರೈತಸಂಘದ ಸಭೆಯಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಪತ್ರಿಕೆಗೆ ತಿಳಿಸಿದ್ದಾರೆ.
ರಾಜ್ಯದ ರೈತರ ಹಿತದೃಷ್ಟಿಯಿಂದ ಎರಡು ಬಣಗಳು ಒಂದೇ ದಾರಿಯಲ್ಲಿ ಸಾಗಬೇಕೆಂಬ ಆಶಯದಿಂದ ಒಗ್ಗೂಡುವ ಪ್ರಕ್ರಿಯೆಗೆ ಮುಂದಾಗಿದ್ದೇವೆ. ಈ ಕುರಿತು ಜ. 31ರಂದು ಹೊಸಪೇಟೆಯಲ್ಲಿ ನಡೆಯುವ ರಾಜ್ಯ ಘಟಕದ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ ನೀಡಿದರು.
ಮುರುಘಾಮಠದ ವತಿಯಿಂದ ಈ ಬಾರಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಶಿವಮೂರ್ತಿ ಮುರುಘಾ ಶರಣರು, ರೈತ ಮುಖಂಡ ಪ್ರೊ.ಎಂ. ನಂಜುಂಡಸ್ವಾಮಿ ಅವರಿಗೆ ಮರಣೋತ್ತರ ~ಬಸವಶ್ರೀ~ ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭದಲ್ಲಿ ರೈತಸಂಘ ಬಣಗಳು ಒಗ್ಗೂಡಿ ಒಂದೇ ವೇದಿಕೆ ಅಡಿ ಸಾಗಬೇಕು ಎನ್ನುವ ಆಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರೈತಸಂಘ ಒಗ್ಗೂಡುವಿಕೆಗೆ ಚಾಲನೆ ದೊರೆತಿದೆ.