ಮಂಡ್ಯ: `ಸರ್ವೋದಯ ಕರ್ನಾಟಕ ಪಕ್ಷದಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕೋ; ಬೇಡವೋ ಅಥವಾ ಯಾವ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂಬ ಬಗ್ಗೆ ಸಭೆ ನಡೆಸಿ ಶುಕ್ರವಾರ (ಆ. 2) ಪ್ರಕಟಿಸಲಾಗುವುದು' ಎಂದು ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ತಿಳಿಸಿದರು.
`ರೈತ ನಾಯಕಿ ನಂದಿನಿ ಜಯರಾಂ ಅವರನ್ನು ಚುನಾವಣಾ ಅಖಾಡಕ್ಕೆ ಇಳಿಸುವ ಆಲೋಚನೆ ಇದೆ. ಆದರೆ, ಅವರ ಒಪ್ಪಿಗೆ ದೊರೆತಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿ ಶುಕ್ರವಾರ ಪಕ್ಷದ ನಿಲುವು ಪ್ರಕಟಿಸಲಾಗುವುದು' ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜೀನಾಮೆ ನೀಡಿ ಉಪ ಚುನಾವಣೆಗೆ ಕಾರಣವಾಗುವವರಿಗೆ ಕನಿಷ್ಠ ರೂ 20 ಕೋಟಿ ದಂಡ ವಿಧಿಸಬೇಕು. ಈ ಸಂಬಂಧ ಕಾನೂನಿಗೆ ತಿದ್ದುಪಡಿ ಆಗಬೇಕು. 6 ದಶಕಗಳಿಂದಲೂ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಸಮರ್ಥ ಅಭ್ಯರ್ಥಿಗಳು ಪ್ರತಿನಿಧಿಸಿಲ್ಲ. ಹೀಗಾಗಿಯೇ, ಕೈಗಾರಿಕೆ ಸ್ಥಾಪನೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಎಂದರು.