ಹೆತ್ತೂರು (ಹಾಸನ ಜಿಲ್ಲೆ): ಹೋಬಳಿಯ ಕಾಗಿನೆರೆ ಕೆಂಪುಹೊಳೆ ಗುಂಡ್ಯಾ ರಕ್ಷಿತಾರಣ್ಯದಲ್ಲಿ ಕಾದಾಟದಲ್ಲಿ ಗಾಯಗೊಂಡಿರುವ ಒಂಟಿ ಸಲಗವೊಂದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ಸುಮಾರು 25 ವರ್ಷದ ಕಾಡಾನೆ ಒಂದು ವಾರದಿಂದ ಆಹಾರ ಸೇವಿಸಿಲ್ಲ. ಮೇಲ್ನೋಟಕ್ಕೆ ಯಾವುದೇ ಗಾಯ ಕಂಡು ಬಂದಿಲ್ಲ. ಆದರೆ, ಎಡಗಾಲನ್ನು ನೆಲದ ಮೇಲೆ ಇಡುತ್ತಿಲ್ಲ. ಮೂಳೆ ಮುರಿದಿರುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಅರಿವಳಿಕೆ ಚುಚ್ಚುಮದ್ದು ನೀಡಿ, ಆನೆ ಸೆರೆ ಹಿಡಿದು ಚಿಕಿತ್ಸೆ ನೀಡಬೇಕಿದೆ. ಆದರೆ, ಇದಕ್ಕೆ ಸರ್ಕಾರದ ಅನುಮತಿ ಬೇಕಿದೆ.
ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಕೆ.ಸಿಂಗ್, ‘ಅರಿವಳಿಕೆ ಚುಚ್ಚುಮದ್ದು ನೀಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಶೀಘ್ರ ಅನುಮತಿ ಸಿಗುವ ಸಾಧ್ಯತೆ ಇದೆ’ ಎಂದು ಹೇಳಿದರು.
‘ಕಾಲು ಊದಿಕೊಂಡಿದೆ. ನರ ಅಥವಾ ಮೂಳೆಗೆ ಗಾಯವಾಗಿರುವ ಸಾಧ್ಯತೆ ಇದೆ. ಎಕ್ಸ್ ರೇ ಮೂಲಕ ಪರೀಕ್ಷಿಸಬೇಕಿರುವುದರಿಂದ ಅರಿವಳಿಕೆ ಚುಚ್ಚುಮದ್ದು ನೀಡಬೇಕಿದೆ. ಅರಣ್ಯ ಇಲಾಖೆಗೆ ಪ್ರಾಥಮಿಕ ವರದಿ ನೀಡಲಾಗಿದೆ’ ಎಂದು ಪಶು ವೈದ್ಯಾಧಿಕಾರಿ ಮುರುಳೀಧರ್ ತಿಳಿಸಿದರು.