ಚೆನ್ನೈ: ಇತ್ತೀಚೆಗೆ ಶ್ರೀಲಂಕಾ ನೌಕಾಪಡೆಯಿಂದ ಬಂಧನಕ್ಕೊಳಗಾಗಿದ್ದ ತಮಿಳುನಾಡಿನ 18 ಭಾರತೀಯ ಮೀನುಗಾರರು ಮಂಗಳವಾರ ತವರಿಗೆ ಮರಳಿದ್ದಾರೆ.
ಕೊಲಂಬೊದಿಂದ ವಿಮಾನದ ಮೂಲಕ ಚೆನ್ನೈಗೆ ಆಗಮಿಸಿದ ಅವರನ್ನು ತಮಿಳುನಾಡು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಬಿಜೆಪಿಯ ಕೆಲವು ಕಾರ್ಯಕರ್ತರು ಬರಮಾಡಿಕೊಂಡರು.
ಕಳೆದ ತಿಂಗಳು ಸಮುದ್ರ ಗಡಿ ಉಲ್ಲಂಘನೆ ಆರೋಪದ ಮೇಲೆ ಲಂಕಾ ನೌಕಾಪಡೆ ಮೀನುಗಾರರನ್ನು ಬಂಧಿಸಿ ಅಲ್ಲಿನ ಜೈಲಿನಲ್ಲಿ ಇರಿಸಿತ್ತು..
ಸ್ಥಳೀಯ ನ್ಯಾಯಾಲಯವು ಈ ತಿಂಗಳ ಆರಂಭದಲ್ಲಿ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತ್ತು. ನಂತರ ಅವರನ್ನು ಅಲ್ಲಿನ ಶಿಬಿರದಲ್ಲಿ ಇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದ್ದ ವಾಹನದಲ್ಲಿ ಮೀನುಗಾರರು ರಾಮನಾಥಪುರಕ್ಕೆ ತೆರಳಿದ್ದಾರೆ.