ಇಸ್ಲಾಮಾಬಾದ್ (ಪಿಟಿಐ): ‘ಬುಧವಾರ ಬೆಳಿಗ್ಗೆ ನನ್ನನ್ನು ಅಪಹರಿಸಲು ಯತ್ನಿಸಿದ ಅನಾಮಿಕ ಗುಂಪೊಂದು ನನಗೆ ಹೊಡೆದು, ಕೊಲೆ ಬೆದರಿಕೆ ಹಾಕಿದೆ’ ಎಂದು ಪಾಕಿಸ್ತಾನದ ಸೇನೆಯ ಕಟು ವಿಮರ್ಶಕ ಮತ್ತು ಪತ್ರಕರ್ತ ತಹಾ ಸಿದ್ಧಿಕಿ ಹೇಳಿಕೊಂಡಿದ್ದಾರೆ.
ಭಾರತದ ಡಬ್ಲ್ಯುಐಒಎನ್ (ವರ್ಲ್ಡ್ ಈಸ್ ವನ್ ನ್ಯೂಸ್) ವಾಹಿನಿಯ ಪಾಕಿಸ್ತಾನ ಬ್ಯೂರೊದ ಮುಖ್ಯಸ್ಥರಾಗಿ ತಹಾ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಮೇಲೆ ನಡೆದ ದಾಳಿಯ ಕುರಿತು ಅವರು ಸರಣಿ ಟ್ವೀಟ್ ಮಾಡಿದ್ದಾರೆ.
‘ರಾವಲ್ಪಿಂಡಿ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ 10–12 ಜನರ ಗುಂಪು ತಹಾ ಮೇಲೆ ದಾಳಿ ನಡೆಸಿ, ಅಪಹರಿಸಲು ಯತ್ನಿಸಿದೆ. ಆದರೆ ಅವರು ಪಾರಾಗಿದ್ದಾರೆ’ ಎಂದು ‘ಡಾನ್’ ಪತ್ರಿಕೆ ಬರೆದಿದೆ.