ಗ್ಲಾಸ್ಗೊ: ‘ಹವಾಮಾನ ಬದಲಾವಣೆ ಕುರಿತು ನಡೆದ ಶೃಂಗಸಭೆ (ಸಿಒಪಿ 26 ಶೃಂಗಸಭೆ) ಯಶಸ್ವಿಯಾಗಿದೆ. ಜಾಗತಿಕ ಸಮುದಾದ ಎದುರು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ತಮ್ಮ ಕಳವಳ ಹಾಗೂ ಚಿಂತನೆಗಳನ್ನು ಒಕ್ಕೊರಲಿನಿಂದ ಮಂಡಿಸುವಲ್ಲಿ ಸಫಲವಾದವು’ ಎಂದು ಭಾರತ ಭಾನುವಾರ ಹೇಳಿದೆ.
ಭಾರತ ನಿಯೋಗದ ನೇತೃತ್ವ ವಹಿಸಿದ್ದ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಮಾತನಾಡಿ, ‘ಹವಾಮಾನ ಬದಲಾವಣೆಯಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಬದಲಾದ ಜೀವನ ಶೈಲಿ, ಭೋಗ ಸಂಸ್ಕೃತಿ ಹೆಚ್ಚಳವೇ ಹವಾಮಾನ ವೈಪರೀತ್ಯಕ್ಕೆ ಕಾರಣ’ ಎಂದರು.
‘ಹವಾಮಾನ ಬದಲಾವಣೆ ತಡೆಗೆ ಸಂಬಂಧಿಸಿ ಬಾರತದ ನಿಲುವನ್ನು ಶೃಂಗಸಭೆಯು ಪ್ರತಿಧ್ವನಿಸಿದೆ. ಶೃಂಗಸಭೆಯಲ್ಲಿ ಭಾರತ ರಚನಾತ್ಮಕ ಚರ್ಚೆಯ ಜೊತೆಗೆ ಪರಿಹಾರಾತ್ಮಕ ಕ್ರಮಗಳನ್ನು ಪ್ರಸ್ತುತಪಡಿಸಿತು’ ಎಂದು ಹೇಳಿದ್ದಾರೆ.