ಒಟ್ಟಾವ: ಕಳೆದ ವರ್ಷ, ಕೆನಡಾದ ಟೊರಾಂಟೊದ ಪ್ರಮುಖ ವಿಮಾನ ನಿಲ್ದಾಣದಲ್ಲಿ ₹136 ಕೋಟಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಭಾರತ ಮೂಲದ ಇಬ್ಬರು ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಅಲ್ಲಿಯ ಪೊಲೀಸರು ತಿಳಿಸಿದ್ದಾರೆ.
ಬಂಧಿತರಲ್ಲಿ ಒಂಟಾರಿಯೊ ನಿವಾಸಿಗಳಾದ ಪರಮ್ಪಾಲ್ ಸಿಧು (54) ಮತ್ತು ಅಮಿತ್ ಜಲೋಟ (40) ಭಾರತ ಮೂಲದವರು.
ಚಿನ್ನದ ಗಟ್ಟಿಗಳು ಮತ್ತು ವಿದೇಶಿ ಕರೆನ್ಸಿಯನ್ನು ಸ್ವಿಟ್ಜರ್ಲೆಂಡ್ನ ಜ್ಯೂರಿಕ್ನಿಂದ 2023ರ ಏಪ್ರಿಲ್ 17ರಂದು ಸರಕು ವಿಮಾನವೊಂದರಲ್ಲಿ ತರಲಾಗಿತ್ತು. ಅವನ್ನು ಭದ್ರತಾ ಕೊಠಡಿಯಲ್ಲಿ ಇರಿಸಲಾಗಿತ್ತು. ನಕಲಿ ಕಾಗದಪತ್ರಗಳನ್ನು ಬಳಿಸಿ ಅವನ್ನೆಲ್ಲ ಲೂಟಿ ಮಾಡಲಾಗಿದೆ. ಕೆನಡಾದ ವಿಮಾನಯಾನ ಸಂಸ್ಥೆ ‘ಏರ್ ಕೆನಡಾ’ದ ಕನಿಷ್ಠ ಇಬ್ಬರು ಮಾಜಿ ಸಿಬ್ಬಂದಿ ಈ ದರೋಡೆಗೆ ಸಹಕರಿಸಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.