ಬ್ರೂನಿ (ಪಿಟಿಐ): ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಶನಿವಾರ ಇಲ್ಲಿ ವಿಶ್ವದ ಸಿರಿವಂತ ದೊರೆ ಬ್ರೂನಿ ದೇಶದ ಸುಲ್ತಾನ್ ಹಸ್ಸನಲ್ ಬೋಲ್ಕಿಯ ಅವರನ್ನು ಭೇಟಿಯಾಗಿ, ಇಂಧನ ಕ್ಷೇತ್ರದಲ್ಲಿ ಪರಸ್ಪರ ಹೆಚ್ಚಿನ ಸಹಕಾರದ ಬಗ್ಗೆ ಇಂಗಿತ ವ್ಯಕ್ತಪಡಿಸಿದರು.
ಫೋಬ್ಸ್ ನಿಯತಕಾಲಿಕದ ಪ್ರಕಾರ ಅಪಾರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಂಗ್ರಹ ಹೊಂದಿರುವ ಬ್ರೂನಿ ಜಗತ್ತಿನ ಐದನೇ ಶ್ರೀಮಂತ ರಾಷ್ಟ್ರ.
`ಇಂಧನ ಕ್ಷೇತ್ರದಲ್ಲಿ ಬ್ರೂನಿ ಜತೆ ಸಹಕಾರ ವೃದ್ಧಿಸಲು ಭಾರತ ಉತ್ಸುಕವಾಗಿದ್ದು, ದೀರ್ಘಕಾಲೀನ ಒಪ್ಪಂದ ಮಾಡಿಕೊಳ್ಳಲು ಎದುರು ನೋಡುತ್ತಿರುವುದಾಗಿ~ ಕೃಷ್ಣ ತಿಳಿಸಿದರು.
ಭಾರತದೊಂದಿಗೆ ವಾಣಿಜ್ಯ ಕ್ಷೇತ್ರದಲ್ಲಿ ಬಾಂಧವ್ಯ ವೃದ್ಧಿ, ಅದರಲ್ಲೂ ಪೆಟ್ರೋಲಿಯಂ ಕ್ಷೇತ್ರದಲ್ಲಿ ಸಂಬಂಧ ಹೆಚ್ಚಿಸಲು ಕ್ರಮ ತೆಗೆದುಕೊಳ್ಳುವುದಾಗಿ ಸುಲ್ತಾನ್ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಬ್ರೂನಿ ವಿದೇಶಾಂಗ ಸಚಿವೆಯೂ ಆಗಿರುವ ರಾಜಕುಮಾರಿ ಹಜಾ ಮಸ್ನಾ ಅವರನ್ನೂ ಕೃಷ್ಣ ಭೇಟಿ ಮಾಡಿ, ದ್ವಿಪಕ್ಷೀಯ ಸಂಬಂಧ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು.
ಮುಂದಿನ ವರ್ಷ ಆಸಿಯಾನ್ ದೇಶಗಳ ಶೃಂಗಸಭೆ ಭಾರತದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೃಷ್ಣ ಬ್ರೂನಿಯಲ್ಲಿದ್ದಾರೆ. ಸುಲ್ತಾನ್ ಡಿಸೆಂಬರ್ನಲ್ಲಿ ನವದೆಹಲಿಗೆ ಭೇಟಿ ನೀಡಲಿದ್ದಾರೆ.