ಕೊಲಂಬೊ: ನಟ ರಜನಿಕಾಂತ್ ಶ್ರೀಲಂಕಾ ಪ್ರವಾಸ ರದ್ದಾಗಿರುವುದಕ್ಕೆ ತಮಿಳುನಾಡು ರಾಜಕಾರಣಿಗಳ ವಿರುದ್ಧ ಜಾಫ್ನಾದ ನಲ್ಲೂರು ಕೊವಿಲ್ನಲ್ಲಿ ಪ್ರತಿಭಟನೆ ನಡೆಸಲಾಯಿತು.
ತಮಿಳು ರಾಷ್ಟ್ರೀಯ ಮೈತ್ರಿಕೂಟ (ಟಿಎನ್ಎ) ಸೇರಿ ವಿವಿಧ ಪಕ್ಷಗಳ ನೂರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪ್ರತಿಭಟನಾನಿರತರು ತಮಿಳುನಾಡು ರಾಜಕಾರಣಿಗಳ ವಿರುದ್ಧ ಘೋಷಣೆಗಳುಳ್ಳ ಕರಪತ್ರಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಲೈಕಾ ಗ್ರೂಪ್ನ ಜ್ಞಾನಂ ಪ್ರತಿಷ್ಠಾನ ನಿರ್ಮಿಸಿರುವ 150 ಮನೆಗಳನ್ನು ಸ್ಥಳಾಂತರಿತ ತಮಿಳರಿಗೆ ಹಸ್ತಾಂತರಿಸಲು ರಜನಿಕಾಂತ್ ಏಪ್ರಿಲ್ 9ರಿಂದ ಎರಡು ದಿನಗಳ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದರು.
ಆದರೆ, ತಮಿಳುನಾಡಿನ ರಾಜಕಾರಣಿಗಳಿಂದ ವಿರೋಧ ವ್ಯಕ್ತವಾದದ್ದರಿಂದ ಪ್ರವಾಸವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿದ್ದರು.ಎಂಡಿಎಂಕೆ, ವಿಸಿಕೆ ಮತ್ತಿತರ ರಾಜಕೀಯ ಪಕ್ಷಗಳ ವಿರೋಧದ ಕಾರಣ ಪ್ರವಾಸ ರದ್ದುಪಡಿಸುವುದಾಗಿ ರಜನಿಕಾಂತ್ ಈಗಾಗಲೇ ತಿಳಿಸಿದ್ದಾರೆ.