‘ನಿನಗೆ ಕುಡುಕರ ಕುಟುಂಬ ಅಭಿವೃದ್ಧಿ ನಿಗಮ ಅಂತ ಕೊಡಬೋದು ನೋಡಲೆ. ಎಲೆಕ್ಷನ್ನಲ್ಲಿ ರೊಕ್ಕ ಇಸ್ಕಂಡು ಕುಡಿದು ಮಕ್ಕಂತಿದ್ಯಲ್ಲ’ ತೆಪರೇಸಿ ಕಿಸಕ್ಕೆಂದ.
‘ಅಲ್ಲ, ಕುಡುಕರ ಅಭಿವೃದ್ಧಿ ಓಕೆ, ಕುಟುಂಬದ್ದು ಯಾಕೆ?’ ಮಂಜಮ್ಮನ ಪ್ರಶ್ನೆ.
‘ಯಾಕೆ ಅಂದ್ರೆ ಕುಡುಕರು ಗೊಟಕ್ ಅಂದ್ಮೇಲೆ ಅವರ ಕುಟುಂಬ ನೋಡ್ಕಳಾರು ಯಾರು? ಅವರಿಗೂ ಪರಿಹಾರ, ನೌಕ್ರಿ ಕೊಡ್ಬೇಕು ತಾನೆ? ಜುಜುಬಿ ಆ್ಯಕ್ಸಿಡೆಂಟ್ ಆಗಿ ಸತ್ತೋರಿಗೆಲ್ಲ ಪರಿಹಾರ ಕೊಡ್ತಾರಂತೆ, ಇನ್ನು ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟೋ ಕುಡುಕರಿಗೆ ಯಾಕೆ ಪರಿಹಾರ ಕೊಡ್ಬಾರ್ದು?’ ದುಬ್ಬೀರನ ಉತ್ತರ.
‘ಈಗ ಸಿಎಂ, ಡಿಸಿಎಂ ಸೇರಿ ‘ಏಟಿಗೆ ಎದುರೇಟು ಮಂಡಳಿ, ಲೋಕಸಭೆ ಟಾರ್ಗೆಟ್ ನಿಗಮ’ ಅಂತ ಎರಡು ಹೊಸಾವು ಮಾಡಿದಾರಂತೆ, ನಿಂಗ್ಯಾವುದು ಬೇಕಲೆ? ಹೆಂಗೂ ಎಮ್ಮೆಲ್ಲೆಗಳನ್ನ ಗೆಲ್ಸಿದೀಯ, ಈಗ ಎಂಪಿಗಳನ್ನೂ ಗೆಲ್ಸು’ ಗುಡ್ಡೆ ಕೊಟ್ರನ್ನ ಕೇಳಿದ.
‘ನಂಗ್ಯಾವುದೂ ಬ್ಯಾಡ, ನಿಂಗೆ ‘ಗುಮಾನಿ’ ಅನ್ನೋ ಬೋರ್ಡ್ ಕೊಡ್ಸಾಣಾಂತಿದೀನಿ, ತಗಂತೀಯ?’
‘ಗುಮಾನಿನಾ? ಅಂದ್ರೆ?’
‘ನೀನು ಮೊದ್ಲು ಗುಡ್ಡೆ ಮಾಂಸ ಮಾರ್ತಿದ್ಯೆಲ್ಲ, ಅದ್ಕೆ ನಿಂಗೆ ‘ಗುಡ್ಡೆ ಮಾಂಸ ನಿಗಮ’ ಕೊಡ್ಸಣಾಂತ’ ಕೊಟ್ರನ ತಿರುಗೇಟಿಗೆ ಹರಟೆಕಟ್ಟೆಯಲ್ಲಿ ನಗುವಿನ ಅಲೆ ತೇಲಿತು.