ಮಠವೊಂದರ ಕಟ್ಟಡದ ಉದ್ಘಾಟನೆ ನೆರವೇರಿತು. ರಾಜಕೀಯ ನೇತಾರರು ಮತ್ತು ನೂರಾರು ಧಾರ್ಮಿಕರು ಆ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಠದ ಸ್ವಾಮಿಗಳು ಸ್ವಾಗತ ಭಾಷಣದ ಬಳಿಕ ಪ್ರಾಸ್ತಾವಿಕ ಮಾತನ್ನಾಡಲು ಮುಂದಾದರು. ಎಂಥ ಸಂದರ್ಭದಲ್ಲಿ ಪ್ರಾಸ್ತಾವಿಕ ಮಾತು ಬೇಕಾಗುತ್ತದೆ? ಗೋಷ್ಠಿಯೊಂದಕ್ಕೆ ನಿಗದಿಪಡಿಸಲಾದ ವಿಚಾರ, ಅದರ ಹಳಿಯನ್ನು ದಾಟಬಾರದೆಂದು ಕೆಲ ಮಾಹಿತಿ-ಯನ್ನು ಕೊಡಲಾಗುತ್ತದೆ. ಇದರ ಹೊರತಾಗಿ ಪ್ರಾಸ್ತಾವಿಕ ನುಡಿಗಳ ಅಗತ್ಯ ಇರುವುದಿಲ್ಲ.
ಇತ್ತೀಚೆಗೆ ಕೆಲವರು ತಾವೇ ಸಂಘಟಿಸಿದ ಸಮಾರಂಭದಲ್ಲಿ ಸುದೀರ್ಘವಾದ ಪ್ರಾಸ್ತಾವಿಕ ಭಾಷಣ ಮಾಡುತ್ತಾರೆ. ಇದು ಅನುಚಿತವಾದ ಕ್ರಮ. ತಾವೇ ಸಂಘಟಿಸಿದ ಸಮಾರಂಭದಲ್ಲಿ ತಮಗೆ ಮಾತನಾಡಲು ಸ್ವಾತಂತ್ರ್ಯ ಇರುತ್ತದಾದರೂ ಬೇರೆಯವರು ಏನು ಹೇಳುತ್ತಾರೆಂದು ಕೇಳಿಸಿಕೊಳ್ಳಬೇಕಾಗುತ್ತದೆ. ಪರಿಣತರು ಮತ್ತು ಅನುಭವಿಗಳು ನೀಡುವ ಚಿಂತನೆಗಳಿಂದ ತಮ್ಮ ಮಾತಿನ ಜಾಡನ್ನು ಬದಲಿಸಿಕೊಳ್ಳಲು ಉತ್ತಮ ಒಳನೋಟಗಳು ದೊರೆಯುತ್ತವೆ. ಅರಿವನ್ನು ಕಟ್ಟಿಕೊಡುವುದರ ಬದಲು ತಮ್ಮ ಪಾಂಡಿತ್ಯ ಪ್ರದರ್ಶನಕ್ಕೆ ಅಥವಾ ಮತ್ತಿನ್ಯಾವುದಕ್ಕೋ ಒತ್ತು ಕೊಡಲಾಗುತ್ತದೆ.
ನನ್ನನ್ನೂ ಸೇರಿ ನಾಲ್ವರು ಪೀಠಾಧೀಶರು ಭಾಗವಹಿಸಿದ್ದೆವು. ಪ್ರಾಸ್ತಾವಿಕ ಮಾತಿಗೆ ತೊಡಗಿದ ಸ್ವಾಮಿಗಳು, ಅವರ ಮಠಕ್ಕೆ ಆರಂಭದ ದಿನಗಳಲ್ಲಿ ಏನೂ ಇರಲಿಲ್ಲ ಎಂಬುದನ್ನು ಪ್ರಸ್ತಾಪಿಸಿದರು. ನಿಜ, ಅವರು ಶೂನ್ಯದಿಂದ ಎದ್ದು ಬಂದಿದ್ದಾರೆ. ಎರಡು ಮಾತಿಲ್ಲ. ಎಲ್ಲ ಇದ್ದವರು ಸಾಧಿಸುವುದಕ್ಕಿಂತ ಏನೂ ಇಲ್ಲದವರು ಸಾಧಿಸುವುದೇ ನಿಜವಾದ ಸಾಧನೆ. ಸಮಾಜ ಸುಧಾರಣೆಯು ಭೌತಿಕ ಸುಧಾರಣೆಗಿಂತ ಹೆಚ್ಚಿನ ಸವಾಲಿನದು. ಹಲವರದು ಭೌತಿಕ ಸುಧಾರಣೆ; ಕೆಲವರದು ಸಾಮಾಜಿಕ ಸುಧಾರಣೆ.
ಪ್ರಾಸ್ತಾವಿಕ ಮಾತುಗಳು ಮುಂದೆ ಹಳಿಯನ್ನು ತಪ್ಪಿದವು. ಅವರು ಮುಂದೆ ರಾಜಕೀಯ ಭಾಷಣ ಮಾಡಿದರು. ಈ ರಾಜ್ಯಕ್ಕೆ ಮಂತ್ರಿಗಳು, ಮುಖ್ಯಮಂತ್ರಿಗಳು ಯಾರಾಗಬೇಕೆಂದು ಪ್ರಸ್ತಾಪಿಸಿದರು. ಆಗ ನಾನು ಪಕ್ಕದಲ್ಲಿ ಕುಳಿತಿದ್ದ ಪೀಠಾಧೀಶರೊಬ್ಬರಿಗೆ ‘ಸ್ವಾಮಿಗಳು ಹಳಿ ತಪ್ಪಿದರು. ಸಮತೋಲನ ಕಳಕೊಂಡರು. ನಾವೆಲ್ಲ ಭಾಗವಹಿಸಿದ ಸಂದರ್ಭದಲ್ಲಿ ಹೀಗೆ ಸಭೆಯ ದಿಕ್ಕನ್ನು ಬದಲಿಸುವುದು ಸರಿಯಲ್ಲ’ ಎಂದು ಆಕ್ಷೇಪಿಸಿದೆ. ಆ ಮಠಾಧೀಶರೂ ನನ್ನ ಅಭಿಪ್ರಾಯವನ್ನು ಸಮರ್ಥಿಸಿದರು. ನನಗಂತೂ ತುಂಬಾ ಕಸಿವಿಸಿ.
ಅವರ ಪ್ರಾಸ್ತಾವಿಕ ಮಾತುಗಳ ನಂತರ ನನಗೆ ಮಾತನಾಡಲು ಅವಕಾಶ. ಎಲ್ಲ ಕ್ಷೇತ್ರಗಳಲ್ಲೂ ಇಂದು ಅಸಂಬದ್ಧ ಪ್ರಲಾಪ. ವಿನಾಕಾರಣ ರಗಳೆಗಳು ಕೇಳಿಬರುತ್ತಿವೆ. ಅಸಂಬದ್ಧ ಪ್ರಲಾಪಗಳಿಗೆ ಕಾರಣವೇನೆಂದರೆ, ವಿವೇಚನೆ ಇಲ್ಲದಿರುವುದು. ಶರೀರ– ಇಂದ್ರಿಯ ಮತ್ತು ಬುದ್ಧಿಯ ನಡುವಿನ ಸಮತೋಲನವನ್ನು ಕಳಕೊಳ್ಳುವುದು. ಈ ಸ್ಥಿತಿಯನ್ನು ಕಳಕೊಳ್ಳುವುದರಿಂದ ಅರ್ಥಹೀನ ಹೇಳಿಕೆಗಳು, ಹೋಲಿಕೆಗಳು, ವ್ಯಾಖ್ಯಾನಗಳು, ಸಮಂಜಸವಲ್ಲದ ನಡೆಗಳು. ಇಂಥ ನಡೆ ಮತ್ತು ನುಡಿಯು ಯಾವುದೇ ಸ್ಥಾನದಲ್ಲಿರುವ ವ್ಯಕ್ತಿಯ ಗೌರವ, ಘನತೆಯನ್ನು ಕಳೆದುಬಿಡುತ್ತದೆ. ಎಂಥವರ ಬಾಯಲ್ಲಿ ಎಂಥ ನುಡಿ ಬಂದುಬಿಟ್ಟಿತಲ್ಲ!
ಎನ್ನಲು ಅವಕಾಶ. ಸಾರ್ವಜನಿಕ ಕ್ಷೇತ್ರದಲ್ಲಿ ಅದರಲ್ಲೂ ಸ್ವಾಮಿಗಳಾದ ನಮಗೆ ಸಾಮಾನ್ಯಜ್ಞಾನ ಹೆಚ್ಚಿಗೆ ಇದ್ದಷ್ಟೂ ಸುರಕ್ಷಿತ. ಇದರ ಕೊರತೆಯಿಂದ ಸಂಭವಿಸುವ ರಗಳೆ (ಉಪದ್ರವ)ಗಳು ಅಧಿಕ. ಅದನ್ನು ನೋಡಿ, ಕೇಳಿ ಅವಮಾನಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅವಮಾನಿಸುವವರು ಕೇವಲ ಬಹಿರಂಗದಲ್ಲಿದ್ದಾರೆಂದು ಕೆಲವರು ಭಾವಿಸುತ್ತಾರೆ.
ಅವಮಾನಿಸುವವರು ಪ್ರತಿಯೊಬ್ಬರ ಅಂತರಂಗದಲ್ಲೇ ಇದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಜಾಗೃತಿ ಇರುವುದಾದಲ್ಲಿ ಅಸಂಬದ್ಧ ಪ್ರಲಾಪಗಳಿಗೆ ಅವಕಾಶ ಆಗುವುದಿಲ್ಲ. ನಮ್ಮಲ್ಲಿ ಮೊದಲು ಪ್ರಜ್ಞೆ ಇರಬೇಕು. ಪ್ರಜ್ಞೆಯೊಟ್ಟಿಗೆ ಸಾಮಾನ್ಯ ಪ್ರಜ್ಞೆ ಇದ್ದರೆ, ಗೌರವಾನ್ವಿತ ನಡೆ. ಪ್ರಜ್ಞೆ (ಸೆನ್ಸ್) + ಸಾಮಾನ್ಯ ಪ್ರಜ್ಞೆ (ಕಾಮನ್ ಸೆನ್ಸ್) = ದಿವ್ಯ(ಜ್ಞಾನ)ಪ್ರಜ್ಞೆ (ಬ್ರಿಲಿಯನ್ಸ್).
ಸಮಾರಂಭವೊಂದರಲ್ಲಿ ಒಬ್ಬರ ಅಸಮತೋಲನದ ಮಾತುಗಳು ಸಂದರ್ಭದ ಔಚಿತ್ಯವನ್ನು ಹಾಳು ಮಾಡುತ್ತವೆ ಮಾತ್ರವಲ್ಲ ಭಾಗವಹಿಸಿದವರಲ್ಲಿ ಎಲ್ಲಿಲ್ಲದ ಕಸಿವಿಸಿಗೆ ಕಾರಣವಾಗುತ್ತವೆ. ಸಮಾರಂಭವನ್ನು ಮುಗಿಸಿಕೊಂಡು ವೇದಿಕೆಯಿಂದ ಎದ್ದಾಗ, ವಿದ್ಯುನ್ಮಾನ ಮಾಧ್ಯಮದವರು ತಮ್ಮ ಕ್ಯಾಮೆರಾದೊಂದಿಗೆ ನನ್ನನ್ನು ಅಡ್ಡಗಟ್ಟಿ, ಸ್ವಾಮಿಗಳ ರಾಜಕಾರಣದ ಪರವಾಗಿನ ಮಾತುಗಳಿಗೆ ನೀವು ಏನು ಹೇಳುತ್ತೀರೆಂದು ಕೇಳಿದರು. ‘ಇಲ್ಲ, ನಾನು ಈ ಬಗ್ಗೆ ಏನೂ ಹೇಳುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.
ನೀವುಗಳು ವೇದಿಕೆಯಲ್ಲಿ ಇದ್ದುದರಿಂದ ನಿಮಗೂ ಸಂಬಂಧಿಸುತ್ತದೆಂದು ಪಟ್ಟುಹಿಡಿದರು. ‘ಅದು ಅವರ ಸ್ವಂತ ವಿಚಾರವೇ ಹೊರತು, ನಮ್ಮೆಲ್ಲರ ವಿಚಾರವಲ್ಲ; ಅವರನ್ನೇ ಕೇಳಿರಿ’ ಎಂದು ಹೇಳಿ, ಬುದ್ಧಿಪೂರ್ವಕವಾಗಿ ತಳ್ಳಿಹಾಕಿ ಹೊರಬಂದೆ. ಸಂಜೆಯ ವೇಳೆಗೆ ಕೆಲ ಚಾನೆಲ್ಗಳು ಅದನ್ನು ಮರುಪ್ರಸಾರ ಮಾಡುವಾಗ ನನ್ನ ಹಾಗೂ ಸುತ್ತೂರು ಶ್ರೀಗಳ ಭಾವಚಿತ್ರಗಳನ್ನು ಸೇರಿಸಿ ಪ್ರಚುರಪಡಿಸಿದವೆಂದು ತಿಳಿಯಿತು. ಭಾವಚಿತ್ರಗಳನ್ನು ಹಾಕುವುದರಿಂದ ದೊಡ್ಡಸುದ್ದಿ ಆಗುತ್ತದೆಂದು ಇಂದಿನ ವಿದ್ಯುನ್ಮಾನ ಚಾನೆಲ್ಗಳ ಅಭಿಪ್ರಾಯ.
ಸುಖಾಸುಮ್ಮನೆ ಭಾವಚಿತ್ರಗಳನ್ನು ಬಳಸಬಾರದೆಂಬ ನೀತಿ ಸಂಹಿತೆ ಅಲ್ಲಿ ಕೆಲಸ ಮಾಡುವವರಲ್ಲಿ ಇರುವುದಾದರೆ, ಇಂಥ ಅನೇಕ ರಗಳೆಗಳನ್ನು ನಿಯಂತ್ರಿಸಬಹುದು. ಮಾಧ್ಯಮದ ಮೇಲೆ ಅತಿಯಾದ ಜವಾಬ್ದಾರಿ ಇದೆ. ಅದನ್ನು ಅರಿತರೆ ಯಾವ ತೊಂದರೆಯಿಲ್ಲ.
ಮರುದಿನ ಒಬ್ಬರು ನನ್ನೊಂದಿಗೆ ಕರೆ ಮಾಡಿ - ‘ನೀವುಗಳೇನಾದರೂ ನಿನ್ನೆಯ ಸಮಾರಂಭದಲ್ಲಿ ರಾಜಕೀಯ ಪ್ರೇರಿತವಾಗಿ ಮಾತನಾಡಿದಿರಾ?’ ಎಂದು ಪ್ರಶ್ನಿಸಿದರು. ನಾನೇನೂ ಉತ್ತರಿಸಲಿಲ್ಲ. ನಾವ್ಯಾರೂ ಹಾಗೆ ನಡೆದುಕೊಂಡಿರುವುದಿಲ್ಲ. ಸಮಾರಂಭವನ್ನು ಸಂಘಟಿಸಿದ ಸ್ವಾಮಿಗಳು ಹಾಗೆ ಮಾತನಾಡಬಾರದಿತ್ತು. ನನಗೆ ಆಗಲೇ ಗೊತ್ತಿತ್ತು ಇದು ಸುದ್ದಿ ಆಗುತ್ತದೆಂದು. ಪ್ರಜ್ಞಾವಂತ ನಡೆಗೆ ಒಳಗಾದವರಿಂದ ತಪ್ಪುಗಳು ಕಡಿಮೆ ಸಂಭವಿಸುತ್ತವೆ. ಮಾರನೇ ದಿನ ಅದೇ ಸ್ವಾಮಿಗಳು ನನ್ನೊಂದಿಗೆ ಮಾತನಾಡಿ- ‘ರಾತ್ರಿಯೆಲ್ಲ ನಿದ್ದೆ ಬರಲಿಲ್ಲ. ನಾನು ಹೀಗೆ ಮಾತನಾಡಬಾರದಿತ್ತು.
ನಿಮ್ಮಂಥವರನ್ನು ಸಂದಿಗ್ಧತೆಗೆ ಸಿಲುಕಿಸಬಾರದಿತ್ತು’ ಮುಂತಾಗಿ ಹಂಚಿಕೊಂಡರು. ‘ಅಹುದು, ನೀವು ನಿನ್ನೆಯ ಸಭೆಯಲ್ಲಿ ನಿಮ್ಮ ಸಾಧನೆಯನ್ನು ಹೇಳಲು ಅವಕಾಶವಿತ್ತು. ನಮ್ಮ ಸಮ್ಮುಖದಲ್ಲಿ ಹಾಗೆ ಮಾತನಾಡಬಾರದಿತ್ತು’ ಎಂದೆ. ರಾಜಕಾರಣಕ್ಕೆ ಸಂಬಂಧಿಸಿದ ಮಾತುಗಳು ಯಾವಾಗಲೂ ಸಮಂಜಸವಲ್ಲ; ಭಾವಾವೇಶದ ಮೇಲೆ ಬುದ್ಧಿಯ ಅಂಕುಶವನ್ನು ಹಾಕುವುದರಿಂದ ಆಗುವ ತಪ್ಪುಗಳನ್ನು ತಪ್ಪಿಸಬಹುದು. ಇಲ್ಲವಾದರೆ ಅದರಿಂದ ಬಹುದೊಡ್ಡ ಅನಾಹುತಗಳು. ಧಾರ್ಮಿಕರಿಗೆ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ, ಮತದಾನದ ಬಗ್ಗೆ ಅರಿವನ್ನು ಮೂಡಿಸುವ ಅಧಿಕಾರವಿದೆ.
ಎಲ್ಲ ಪಕ್ಷಗಳನ್ನು, ಸರ್ವಜಾತಿಯ ಅಭ್ಯರ್ಥಿಗಳನ್ನು ಸಮಾನವಾಗಿ ನೋಡಿಕೊಳ್ಳಬೇಕಾಗುತ್ತದೆ. ಸಮಭಾವ ಇಲ್ಲದೇ ಹೋದಲ್ಲಿ ಪಕ್ಷಭೇದ ಮತ್ತು ಜಾತಿಭೇದ. ಧಾರ್ಮಿಕ ಕೇಂದ್ರವು ರಾಜಕೀಯ ಮತ್ತು ಜಾತಿಯ ಶಕ್ತಿ ಪ್ರದರ್ಶನದ ಕೇಂದ್ರವಾದರೆ, ಜನರು ಮತ್ತು ಜನಪ್ರತಿನಿಧಿಗಳು ಎದುರಿಗೆ ಗೌರವ ನುಡಿಗಳನ್ನಾಡುತ್ತಾರೆ; ಹಿಂದಿನಿಂದ ಅದೇ ಜನರು ಅಗೌರವದ ಮಾತುಗಳನ್ನಾಡುತ್ತಾರೆ.
ಯಾವುದೇಧಾರ್ಮಿಕ ಕೇಂದ್ರದ ಸಮಾರಂಭದಲ್ಲಿ ಜನಪ್ರತಿನಿಧಿಗಳು ಭಾಗವಹಿಸುವುದು, ಅಲ್ಲಿ ಸಮಾವೇಶಗೊಳ್ಳುವ ಭಕ್ತರ ಓಲೈಕೆಗಾಗಿ. ಧಾರ್ಮಿಕ ಕೇಂದ್ರಕ್ಕೆ ಭಕ್ತರು; ರಾಜಕಾರಣಿಗಳಿಗೆ ಮತದಾರರು. ರಾಜಕಾರಣಿಗಳಿಂದ ಇಂಥ ಸಂದರ್ಭದಲ್ಲಿ ಆಶ್ವಾಸನೆಗಳ ಸುರಿಮಳೆ; ಬೂಟಾಟಿಕೆಯ ವರ್ತನೆ. ಎಲ್ಲದಕ್ಕೂ ಮಿತಿಗಳಿವೆ. ಮಿತಿಯನ್ನು ಮೀರಬಾರದಷ್ಟೇ.
ಇನ್ನು ಕೆಲವರಲ್ಲಿ ಜಾಣಮರೆವು. ಕಂಡರೂ ಕಾಣದವರಂತೆ, ಗೊತ್ತಿದ್ದರೂ ಗೊತ್ತಿಲ್ಲದವರಂತೆ ವರ್ತಿಸುವುದು. ಈ ನಡೆಗೆ ಒಳಗಾದವನು ಯಾವುದೇ ಸ್ಥಾನದಲ್ಲಿದ್ದರೂ ನಯವಂಚಕ. ನಯವಂಚಕತನವು ಯಾವುದೇ ನಾಯಕನಿಗೆ ಶೋಭೆ ಅಲ್ಲ. ಅಭಿವೃದ್ದಿ ಪರವಾದ ಪ್ರಯತ್ನವು ಎಂದೆಂದಿಗೂ ಆದರ್ಶ. ಅದು ಅಂತಿಮ. ಸೇಡಿನ ಭಾವನೆಯಿಂದ ಒಬ್ಬರನ್ನು ತುಳಿಯುವುದು, ಮತ್ತೊಬ್ಬರನ್ನು ಎತ್ತಿಕಟ್ಟುವ ಹುನ್ನಾರ ತರವಲ್ಲ. ಸಮತೋಲನವು ಶ್ರೇಷ್ಠವಾದ ಜ್ಞಾನ. ದಿವ್ಯಜ್ಞಾನವೆಂದರೆ ಇದುವೆ ಆಗಿದೆ. ಅದಿತ್ತೆಂದರೆ ಅವಕಾಶವಾದಿ ವರ್ತನೆ ಮತ್ತು ಆಲೋಚನೆಗೆ ಒತ್ತಾಸೆ ಸಿಗುವುದಿಲ್ಲ. ಅದರ ಅಭಾವದಿಂದಾಗಿ ಅನುಮಾನದ ಹುತ್ತವು ಬೆಳೆಯುತ್ತ ಹೋಗುವುದು. ಆರೋಪ, - ಪ್ರತ್ಯಾರೋಪಗಳಲ್ಲಿ ಅಮೂಲ್ಯವಾದ ಸಮಯ ಹಾಳಾಗಬಾರದು. ಖಂಡನೆ ಮತ್ತು ಸಮರ್ಥನೆಯಲ್ಲೂ ಒಳನೋಟ ತೂರಿ ಬರಬೇಕು. ಸಮತೋಲನ ಸ್ಥಿತಿಯಿದ್ದರೆ ಮಾತ್ರ ಪ್ರತಿಕ್ಷಣ ಶಿಕ್ಷಣ; ದಿವ್ಯಜ್ಞಾನ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.