ಜಿಎಸ್ಎಸ್ ಅವರ ಅಂತ್ಯಸಂಸ್ಕಾರ ಕಲಾಗ್ರಾಮದಲ್ಲಿ ನಡೆದಾಗಲೇ ನಾಡಿನ ಪ್ರಜ್ಞಾವಂತರನ್ನು ಈ ಪ್ರಶ್ನೆ ಕಾಡಿತ್ತು. ಈಗ ಅನಂತಮೂರ್ತಿ ಅವರ ಅಂತ್ಯಸಂಸ್ಕಾರವೂ ಅಲ್ಲೇ ಕೇವಲ 25 ಅಡಿ ಅಂತರದಲ್ಲಿ ನಡೆದುಹೋಗಿದೆ. ಪ್ರಸನ್ನ ಅವರು ಹೇಳಿದಂತೆ ಇದು ಮುಂದೆ ಯಾವ್ಯಾವ ಆಯಾಮ ಪಡೆದುಕೊಳ್ಳುತ್ತದೋ ಎಂಬ ಆತಂಕ ಇದ್ದೇ ಇದೆ. ಸರ್ಕಾರ ಈ ವಿಷಯದಲ್ಲಿ ದುಡುಕಿದೆ.
ಇಂತಹ ಸಂದರ್ಭದಲ್ಲಿ ನಮಗೆ ಮತ್ತೆ ನೆನಪಾಗುವವರು ಹಾ.ಮಾ.ನಾಯಕ ಮತ್ತು ತೇಜಸ್ವಿ ಅವರು. ಮೈಸೂರಿನಲ್ಲಿ ಕುವೆಂಪು ನಿಧನರಾದಾಗ ಕೆಲವರು ಮಾನಸ ಗಂಗೋತ್ರಿಯಲ್ಲೇ ಅಂತ್ಯಸಂಸ್ಕಾರ ಆಗಬೇಕೆಂದು ಹಟ ಹಿಡಿದಿದ್ದರಂತೆ. ಈ ವಿಷಯ ತಿಳಿದ ತಕ್ಷಣ ಹಾ.ಮಾ.ನಾ ಅವರು ‘ಇಂದು ಕುವೆಂಪು ಅವರನ್ನು ಅಲ್ಲಿ ಮಲಗಿಸಿದರೆ ಮುಂದೆ ವಿಶ್ವವಿದ್ಯಾಲಯದ ಎಲ್ಲ ಕುಲಪತಿಗಳನ್ನೂ ಅಲ್ಲೇ ಮಲಗಿಸಬೇಕೆಂಬ ಬೇಡಿಕೆ ಬಂದರೂ ಬರಬಹುದು’ ಎಂದು ಎಚ್ಚರಿಸಿದ್ದರಂತೆ. ತೇಜಸ್ವಿ ಊರಿನಿಂದ ಬಂದಾಗ ಹಾ.ಮಾ.ನಾಯಕರ ಮಾತನ್ನು ಅನುಮೋದಿಸಿ, ಧರಣಿ ಕುಳಿತಿದ್ದವರಿಗೆ ಇದೇ ಮಾತನ್ನು ಹೇಳಿದ್ದರಿಂದ ಗಂಗೋತ್ರಿ ಸ್ಮಶಾನ ಆಗುವುದು ತಪ್ಪಿತು.
ಕಲಾಗ್ರಾಮ ಎಂದು ಹೆಸರನ್ನಿಟ್ಟು ಅದನ್ನು ಸ್ಮಶಾನವನ್ನಾಗಿಸುವುದು ಎಷ್ಟು ಸರಿ? ಸರ್ಕಾರಕ್ಕಂತೂ ದೂರಾಲೋಚನೆ ಇಲ್ಲ. ಆದರೆ ಇಂದಿನ ಸಾಂಸ್ಕೃತಿಕ ನಾಯಕರಿಗೆ, ಸಾಹಿತಿಗಳಿಗೆ ಹಾ.ಮಾ.ನಾಯಕರ ದೂರದರ್ಶಿತ್ವ, ತೇಜಸ್ವಿ ಅವರ
ಕರ್ತೃತ್ವಶಕ್ತಿ ಇಲ್ಲದಿರುವುದು ನಾಡಿನದೌರ್ಭಾಗ್ಯವೇ ಸರಿ.