ಸರ್ಕಾರ ರಚನೆ; ಸೋನಿಯಾಗೆ ಮುಲಾಯಂ ಸಿಂಗ್ ಅಡ್ಡಿ
ನವದೆಹಲಿ, ಏ. 22– ಕಾಂಗ್ರೆಸ್ ಮತ್ತು ಕಾಂಗ್ರೆಸ್ಸೇತರ ವಿರೋಧ ಪಕ್ಷಗಳಲ್ಲಿ ಒಮ್ಮತಾಭಿಪ್ರಾಯ ಮೂಡದೇ ಇರುವುದರಿಂದ, ನೂತನ ಪರ್ಯಾಯ ಸರ್ಕಾರ ರಚನೆಯ ಅನಿಶ್ಚಿತತೆ ಮುಂದುವರಿದಿದೆ. ಕಾಂಗ್ರೆಸ್ಸೇತರ ರಂಗದ ನೇತೃತ್ವದಲ್ಲಿ ಇಲ್ಲವೇ ಸಮ್ಮಿಶ್ರ ಸರ್ಕಾರ ರಚನೆಯ ಬೇಡಿಕೆಗೆ ಮುಲಾಯಂ ಸಿಂಗ್ ಯಾದವ್ ಹಟ ಹಿಡಿದಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಈ ಮಧ್ಯೆ, ಲೋಕತಾಂತ್ರಿಕ ಮೋರ್ಚಾದ ರಾಷ್ಟ್ರೀಯ ಜನತಾದಳದ ನಾಯಕ ಲಾಲೂ ಪ್ರಸಾದ್ ಯಾದವ್ ತಮ್ಮ 17 ಮಂದಿ ಸದಸ್ಯರ ಬೆಂಬಲವನ್ನು ಮತ್ತು ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು ತಮ್ಮ 18 ಸದಸ್ಯರ ಬೆಂಬಲದ ಪತ್ರಗಳನ್ನು ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರಿಗೆ ಇಂದು ನೀಡಿದರು.
ಈ ಇಬ್ಬರು ಧುರೀಣರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸರ್ಕಾರ ರಚಿಸುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ಅವರಿಗೆ ನೀಡಿರುವ ಪತ್ರಗಳ ನಕಲುಗಳನ್ನು ಜಯಲಲಿತಾ ಮತ್ತು ಲಾಲೂ ಅವರು ಸೋನಿಯಾ ಗಾಂಧಿ ಅವರಿಗೂ ನೀಡಿದ್ದಾರೆ. ಸಿಪಿಐ ಮತ್ತು ಸಿಪಿಎಂ ಕೂಡ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿವೆ.